ಜಾತಿವಾದಿ, ಮತೀಯವಾದಿ ಹಣೆಪಟ್ಟಿ ಕಟ್ಟಿಕೊಳ್ಳಬೇಡ ಎಂದಿದ್ದ ಸತೀಶ್ ರೈ
ಅಣ್ಣನ ನೆನೆದು ದುಃಖಿತರಾದ ಸಚಿವ ರಮಾನಾಥ ರೈ
ಮೈಸೂರು,ಮೇ.13: ನಾನು ರಾಜಕಾರಣಕ್ಕೆ ಬಂದ ದಿನಗಳಲ್ಲಿ ನನ್ನ ಅಣ್ಣ ಸತೀಶ್ ರೈ ನೀನು ಯಾವುದೇ ಕಾರಣಕ್ಕೂ ಜಾತಿವಾದಿ, ಮತೀಯವಾದಿ ಹಣೆಪಟ್ಟಿ ಕಟ್ಟಿಕೊಳ್ಳಬೇಡ ಎಂಬ ಸಲಹೆ ನೀಡಿದ್ದರು. ಅದನ್ನು ಇಂದಿಗೂ ಪಾಲಿಸುತ್ತಾ ಬಂದಿದೇನೆ ಎಂದು ಸಚಿವ ರಮಾನಾಥ ರೈ ದುಖಿ:ತರಾದರು.
ಹಿರಿಯ ಸಹೋದರ ಬೆಳ್ಳಿಪ್ಪಾಡಿ ಡಾ.ಸತೀಶ್ ರೈ ಅವರ ನಿಧನದ ಬಗ್ಗೆ 'ವಾರ್ತಾಭಾರತಿ' ಯೊಂದಿಗೆ ಮಾತನಾಡಿದ ಅವರು, ನಾವು ನಾಲ್ಕು ಜನ ಮಕ್ಕಳು ನಮ್ಮ ನಾಲ್ಕು ಜನಗಳ ಪೈಕಿ ಸತೀಶ್ ರೈ ರಾಜಕಾರಣಿ ಆಗದಿದ್ದರೂ ರಾಜಕೀಯದ ಎಲ್ಲಾ ವಿದ್ಯಮಾನಾಗಳನ್ನು ತಿಳಿದುಕೊಂಡಿದ್ದರು. ನನ್ನ ರಾಜಕೀಯಕ್ಕೆ ಅವರು ಸದಾಕಾಲ ಮಾರ್ಗದರ್ಶನ ನೀಡುತ್ತಿದ್ದರು ಎಂದು ನೆನೆದು ಕಣ್ಣಿರಿಟ್ಟರು.
ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆಂದು ಬಂದ ಅವರು ಮತ್ತೆ ಮಂಗಳೂರಿನತ್ತ ತಿರುಗಿ ನೋಡಲಿಲ್ಲ, ಇಲ್ಲೇ ನೆಲಸಿ ಬಡವರ ವೈದ್ಯರಾಗಿ ಚಿರಪರಿಚಿರಾಗಿದ್ದರು. ನಮ್ಮ ಕುಟುಂಬದ ಸಮಾರಂಭಗಳು ಮತ್ತು ಆಗಾಗ್ಗೆ ಅಷ್ಟೇ ಊರಿಗೆ ಬರುತ್ತಿದ್ದರು ಎಂದು ನೆನಪು ಮಾಡಿಕೊಂಡರು.
ಬಡವರ ವೈದ್ಯರೆಂದೇ ಖ್ಯಾತರಾಗಿ ನಿನ್ನೆ ನಿಧನರಾಗಿದ್ದ ಬಿಳ್ಳಿಪ್ಪಾಡಿ ಡಾ.ಸತೀಶ್ ರೈ ಅವರ ಅಂತ್ಯಕ್ರಿಯೇ ಗುರುವಾರ ಮಧ್ಯಾಹ್ನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನೆರವೇರಿತು.