ಹಣವಿದ್ದಿದ್ದರೆ ನಿಮ್ಮಂತೆ ಗಂಟೆಗೊಂದು ಕೋಟು ಬದಲಾಯಿಸುತ್ತಿದ್ದೆ: ಮೋದಿಗೆ ಖರ್ಗೆ ತಿರುಗೇಟು
ಬೀದರ್, ಮೇ 3: ‘ನಾನು ಶ್ರೀಮಂತ, ಹಣವಂತನೆಂದು ಪ್ರಧಾನಿ ಮೋದಿ ಹೇಳಿದ್ದು, ಇದೇ ಮಾತನ್ನು ಲೋಕಸಭೆಯಲ್ಲಿ ಹೇಳಿದ್ದರೆ ತಕ್ಕ ಉತ್ತರ ನೀಡುತ್ತಿದ್ದೆ. ನನ್ನ ಊರಿಗೆ ಬಂದು ನನ್ನ ಜನರ ಮುಂದೆ ಸುಳ್ಳು ಹೇಳಿದ್ದೀರಲ್ಲ. ನನ್ನ ಬಳಿ ಹಣ ಇದ್ದಿದ್ರೆ ನಿಮ್ಮಂತೆ ಗಂಟೆಗೊಂದು ಕೋಟು ಬದಲಾಯಿಸುತ್ತಿದ್ದೆ’ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿಗೆ ತಿರುಗೇಟು ನೀಡಿದ್ದಾರೆ.
ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಬಳಿ ದುಡ್ಡಿದ್ದಿದ್ದರೆ ನಿಮ್ಮಂತೆ ಜಾಹೀರಾತಿಗೆ ಕೋಟಿ ಕೋಟಿ ರೂ. ಹಣ ಸುರಿಯುತ್ತಿದ್ದೆ. ಕಾಂಗ್ರೆಸ್ ನನ್ನನ್ನು ಮುಖ್ಯಮಂತ್ರಿ ಮಾಡಲಿಲ್ಲವೆಂದು ಒಪ್ಪಿಕೊಳ್ಳೋಣ. ಆದರೆ, ನೀವು ನನಗೆ ವಿಪಕ್ಷ ಸ್ಥಾನವನ್ನು ಏಕೆ ಕೊಡಲಿಲ್ಲ ಎಂಬುದನು ಮೊದಲು ಹೇಳಿ ಎಂದು ಪ್ರಶ್ನಿಸಿದರು.
ಮೋದಿಯವರೇ ಇಲ್ಲಿ ಬಂದು ಅನಗತ್ಯ ಮಾತಾಡುವುದು ಸಲ್ಲ. ಮೊದಲು ನಿಮ್ಮ ಕರ್ತವ್ಯ ನೀವು ನಿಭಾಯಿಸಿ. ನಿಮ್ಮ ಪಕ್ಷದಲ್ಲಿ ದಲಿತ ಮುಖಂಡರು ಗಪ್ ಚುಪ್ ಆಗಿದ್ದಾರೆ. ನಿಮ್ಮ ಮುಂದೆ ದಲಿತ ಬಿಜೆಪಿ ನಾಯಕರು ದನಿ ತೆಗೆಯುವುದಿಲ್ಲ ಎಂದು ಖರ್ಗೆ ಟೀಕಿಸಿದರು.