ಕಾಂಗ್ರೆಸ್ನ್ನು ಮತ್ತೆ ಅಧಿಕಾರಕ್ಕೆ ತರಲು ಜನರು ಸಿದ್ಧರಾಗಿದ್ದಾರೆ: ಮೋಟಮ್ಮ
ಮೂಡಿಗೆರೆ, ಮೇ.4: ಪಟ್ಟಣ ಸಮೀಪದ ಬಿಳಗುಳ ಗ್ರಾಮ, ಇಂದಿರಾನಗರ, ಬೇವಿನಗುಡ್ಡೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಮತಯಾಚನೆ ಮಾಡಿದರು. ಈ ವೇಳೆ ಗ್ರಾಮದ ಜನರು ಮೋಟಮ್ಮ ಅವರಿಗೆ ಹಾರ ಹಾಕುವ ಮೂಲಕ ಅಭೂತಪೂರ್ವ ಸ್ವಾಗತ ಮಾಡಿದರು.
ಈ ವೇಳೆ ಮೋಟಮ್ಮ ಮಾತನಾಡಿ, ಕಳೆದ 3 ಅವದಿಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲದೇ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಆದರೂ ತಾನು ಎಂಎಲ್ಸಿ ಆಗಿ ಸರಕಾರದಿಂದ ಕೋಟ್ಯಾಂತರ ರೂ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಜನರು ಸಿದ್ದರಾಗಿದ್ದಾರೆ. ತಾನು ಮತಯಾಚನೆಗಾಗಿ ಕ್ಷೇತ್ರದ ಯಾವ ಗ್ರಾಮಕ್ಕೆ ತೆರಳಿದರೂ ಜನರು ಅಭೂತಪೂರ್ವವಾಗಿ ಸ್ವಾಗತಿಸುತ್ತಿದ್ದಾರೆ. ಕಾಂಗ್ರೆಸ್ ಗೆಲುವು ಶತ ಸಿದ್ದ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಶೇಖರ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರದಿಂದ ರಾಜ್ಯದಲ್ಲಿ ಎಲ್ಲಾ ವರ್ಗದ ಜನರು ವಿವಿಧ ಯೋಜನೆಯ ಸವಲತ್ತು ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಧನೆ ಬಗ್ಗೆ ಜನರೇ ಅರಿತುಕೊಂಡಿದ್ದರಿಂದ ಕಾಂಗ್ರೆಸ್ಗೆ ಪ್ರಚಂಡ ಬೆಂಬಲ ವ್ಯಕ್ತವಾಗುತ್ತಿದೆ. ಮೋಟಮ್ಮ ಅವರು ಎಂಎಲ್ಸಿ ಆದಾಗಿನಿಂದಲೂ ತಮ್ಮದೇ ಆದ ರಾಜಕೀಯ ಅನುಭವದಿಂದ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಾಂತರ ರೂ. ಅನುದಾನ ತಂದಿದ್ದಾರೆ. ಅಲ್ಲದೆ ಹಿಂದೆ ಸಚಿವೆಯಾಗಿದ್ದಾಗ ಮಾಡಿದ ಅನೇಕ ಜನಪರ ಕೆಲಸಗಳನ್ನು ಇಂದಿಗೂ ಜನರು ಮರೆತಿಲ್ಲ. ಹಾಗಾಗಿ ಈ ಬಾರಿ ಮೋಟಮ್ಮ ಅವರು ಅತೀ ಹೆಚ್ಚಿನ ಮತದಿಂದ ಗೆಲುವು ಸಾಧಿಸಲಿದ್ದಾರೆಂದು ತಿಳಿಸಿದರು.
ಕಾಂಗ್ರೆಸ್ ಎಸ್ಸೀ ವಿಭಾಗದ ಜಿಲ್ಲಾಧ್ಯಕ್ಷ ಎಂ.ಸಿ.ಹೂವಪ್ಪ, ಮಾಜಿ ತಾ.ಪಂ. ಸದಸ್ಯೆ ಹೋವಮ್ಮ, ಮುಖಂಡರಾದ ಕೃಷ್ಣೇಗೌಡ, ರವಿ, ಸಿದ್ದಯ್ಯ, ಲತೀಫ್ ಮತ್ತಿತರರು ಉಪಸ್ಥಿತರಿದ್ದರು.