ಕೆ.ಆರ್.ಪೇಟೆ: ಸಾಲಬಾಧೆಗೆ ರೈತ ಆತ್ಮಹತ್ಯೆ
ಕೆ.ಆರ್.ಪೇಟೆ, ಮೇ 13: ಸಾಲಬಾಧೆ ತಾಳಲಾರದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಾಧುಗೋನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಮಾಸೇಗೌಡರ ಮಗ ಎಸ್.ಎ.ಚಂದ್ರು ಅಲಿಯಾಸ್ ಚಂದ್ರೇಗೌಡ(42) ಆತ್ಮಹತ್ಯೆ ಮಾಡಿಕೊಂಡ ರೈತ.
ಸುಮಾರು 4 ಎಕರೆ ಜಮೀನು ಹೊಂದಿದ್ದ ಚಂದ್ರೇಗೌಡ, ಬೇಸಾಯಕ್ಕೆಂದು ಎಸ್ಬಿಐನಲ್ಲಿ 1 ಲಕ್ಷ ರೂ., ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 50 ಸಾವಿರ ರೂ. ಸೇರಿದಂತೆ 2 ಲಕ್ಷ ರೂ. ಒಡವೆ ಸಾಲ ಮಾಡಿದ್ದರು ಎನ್ನಲಾಗಿದೆ.
ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದು ವಿಫಲವಾಗಿತ್ತು. ಬೆಳೆದ ಬೆಳೆ ಕೂಡಾ ಕೈಸೇರಿರಲಿಲ್ಲ. ಇದರಿಂದಾಗಿ ಸಾಲ ತೀರಿಸಲು ಸಾಧ್ಯವಾಗದೆ ಜಮೀನು ಬಳಿ ವಿಷ ಸೇವಿಸಿದ್ದು, ಮೈಸೂರಿನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ
ಮೃತರಿಗೆ ಪತ್ನಿ ರೂಪ, ಪುತ್ರರಾದ ಯಶಾಂತ್(13), ನಿಶಾಂತ್(12) ಇದ್ದಾರೆ. ಗ್ರಾಮಾಂತರ ಠಾಣೆಯ ಸಬ್ಇನ್ಸ್ಪೆಕ್ಟರ್ ಕೆ.ಎಸ್.ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story