ನನ್ನನ್ನು ನಿದ್ದೆಗೆಡಿಸಲು ಯಾರಿಂದಲೂ ಸಾಧ್ಯವಿಲ್ಲ: ನಿಯೋಜಿತ ಸಿಎಂ ಹೆಚ್ ಡಿಕೆ
ಹಾಸನ, ಮೇ 21: ನನ್ನನ್ನು ನಿದ್ರೆ ಕೆಡಿಸಲು ಯಾರಿಂದಲೂ ಸಾಧ್ಯವಿಲ್ಲ. ನಿದ್ದೆಗೆಡುವ ಪ್ರಸಂಗ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಎದುರಾಗುವುದಿಲ್ಲ ಎಂದು ಕರ್ನಾಟಕದ ನಿಯೋಜಿತ ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಮಾಣವಚನಕ್ಕೂ ಮುನ್ನ ತವರು ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಲು ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ಆಗಮಿಸಿರುವ ಹೆಚ್ ಡಿ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ಶಾಸಕ ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿದರು.
ದೇವರ ಅನುಗೃಹ, ಹೆತ್ತವರ ಆಶೀರ್ವಾದದಿಂದ ಎರಡನೇ ಬಾರಿ ನಾಡಿನ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. 5 ವರ್ಷಗಳ ಕಾಲ ಸುಭದ್ರ ಸರಕಾರ ನೀಡುವ ಸಂಕಲ್ಪ ಮಾಡಿದ್ದೇನೆ ಎಂದು ಅವರು ಹೇಳಿದರು.
ಎಲ್ಲರ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈ ಬಾರಿ ಮುಖ್ಯ ಮಂತ್ರಿ ಹುದ್ದೆ ನಿಭಾಯಿಸುವುದು ಅತ್ಯಂತ ಸವಾಲಿನ ಕೆಲಸ ಎಂದರು.
ಮಧ್ಯಾಹ್ನ ಹೊಸದಿಲ್ಲಿಗೆ ಭೇಟಿ ನೀಡಿ ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ತಮಗೆ ಮುಖ್ಯಮಂತ್ರಿ ಹುದ್ದೆ ನೀಡಿದಕ್ಕಾಗಿ ಕೃತಜ್ಞತೆ ಸಲ್ಲಿಸಲಿದ್ದಾರೆ. ಅವರಿಗೆ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಲು ಆಹ್ವಾನ ನೀಡಲಿರುವ ಹೆಚ್ ಡಿಕೆ ಅವರು. ಸಮ್ಮಿಶ್ರ ಸರಕಾರ ಸಚಿವ ಸಂಪುಟದಲ್ಲಿ ಯಾರಿಗೆಲ್ಲ ಸಚಿವ ಸ್ಥಾನ ನೀಡಬೇಕು ಎನ್ನುವುದನ್ನು ಅಂತಿಮಗೊಳಿಸಲಿದ್ದಾರೆ. ಡಿಸಿಎಂ ಹುದ್ದೆ ಬಗ್ಗೆ ಚರ್ಚಿಸಲಿದ್ದಾರೆ. ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರನ್ನೂ ಇದೇ ಸಂದರ್ಭದಲ್ಲಿ ಭೇಟಿಯಾಗುವುದಾಗಿ ನಿಯೋಜಿತ ಸಿಎಂ ಹೆಚ್ ಡಿಕೆ ಮಾಹಿತಿ ನೀಡಿದ್ದಾರೆ