ಐದು ವರ್ಷ ಕಾಲ ಸುಭದ್ರ ಸರಕಾರ: ಕುಮಾರಸ್ವಾಮಿ ಭರವಸೆ
ಹಾಸನ, ಮೇ 21: ಈ ಬಾರಿ ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸುವುದು ದೊಡ್ಡ ಸವಾಲು ಎಂಬುದು ನನಗೆ ಗೊತ್ತಿದೆ. ಇದಕ್ಕಾಗಿ ಎಲ್ಲರ ಅಭಿಪ್ರಾಯಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಐದು ವರ್ಷ ಕಾಲ ಸುಭದ್ರ ಆಡಳಿತ ನೀಡುವ ಸಂಕಲ್ಪ ಮಾಡಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಹೊಳೇನರಸೀಪುರಕ್ಕೆ ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ಆಗಮಿಸಿದ ಅವರು ಎಚ್.ಎನ್.ಪುರ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ನಾನು ಹುಟ್ಟಿ ಬೆಳೆದ ಲಕ್ಷ್ಮೀ ನರಸಿಂಹ ಸ್ವಾಮಿ, ಹರದನಹಳ್ಳಿ ಶಿವನ ಆಶೀರ್ವಾದ ಪಡೆಯಲು ಬಂದಿದ್ದೇನೆ. ಮಧ್ಯಾಹ್ನ ದಿಲ್ಲಿಗೆ ತೆರಳಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಬಿಎಸ್ಪಿ ನಾಯಕಿ ಮಾಯಾವತಿಯವರನ್ನು ಭೇಟಿಯಾಗಿ ಚರ್ಚಿಸುವೆ ಎಂದರು.
ನನ್ನನ್ನು ಯಾರೂ ನಿದ್ದೆಗೆಡಿಸಲು ಸಾಧ್ಯವಿಲ್ಲ. ಹಾಗೆಂದು ಹೇಳಿಕೆಗಳನ್ನು ನೀಡುತ್ತಿರುವವರು ನಿದ್ದೆಗೆಡುವಂತೆ ಮಾಡುತ್ತೇನೆ ಎಂದು ಬಿಜೆಪಿ ಮುಖಂಡರಾದ ಶ್ರೀರಾಮುಲು ಹಾಗೂ ಕೆ.ಎಸ್.ಈಶ್ವರಪ್ಪರ ಹೇಳಿಕೆ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.