ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರಿಂದ ಮುಷ್ಕರ
ಹಾಸನ,ಮೇ.23: ನಗರದ ಹಳೆ ಬಸ್ನಿಲ್ದಾಣ ರಸ್ತೆ ಬಳಿ ಇರುವ ಮುಖ್ಯ ಅಂಚೆ ಕಚೇರಿ ಬಳಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸಲಾಗುತ್ತಿರುವ ಮುಷ್ಕರ 2ನೇ ದಿನವು ಮುಂದುವರೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ (ಎಐಜಿಡಿಎಸ್ಯು) ಅಧ್ಯಕ್ಷ ಕೆ.ಜಿ. ಶಿವಾಜಿ, ಅತೀ ಶೀಘ್ರದಲ್ಲಿ ಕಮಲೇಶ್ ಕಮಿಟಿ ವರದಿ ಜಾರಿ ಮಾಡುವ ಮೂಲಕ ನ್ಯಾಯಯುತವಾದ ಬೇಡಿಕೆ ಈಡೇರಬೇಕು. ಹೆಚ್ಚಿನ ಅವಧಿ ಕೆಲಸ ಮಾಡುವುದನ್ನು ನಿಲ್ಲಿಸಿ 8 ಗಂಟೆಯ ಕೆಲಸ ಮತ್ತು ಇರುವ ನೌಕರರನ್ನೇ ಖಾಯಂಗೊಳಿಸಬೇಕು ಎಂದರು. ದೆಹಲಿ ಮತ್ತು ಮದ್ರಾಸ್ ಕೇಂದ್ರ ನ್ಯಾಯಾಲಯಗಳ (ಸಿಎಟಿ) ತೀರ್ಮಾನದಂತೆ ಜಿಡಿಎಸ್ ನೌಕರರಿಗೆ ಪಿಂಚಣಿ ನೀಡುವ ವ್ಯವಸ್ಥೆ ಮಾಡಬೇಕು. ಟಾರ್ಗೇಟ್ ಹೆಸರಿನಲ್ಲಿ ಜಿಡಿಎಸ್ ನೌಕರರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಕ್ಷಣದಲ್ಲಿ ನಿಲ್ಲಿಸುವಂತೆ ಮುಷ್ಕರದಲ್ಲಿ ಆಗ್ರಹಿಸಿದರು.
ಹಾಸನ ವಿಭಾಗದಲ್ಲಿ ಒಟ್ಟು 600 ರಿಂದ 700 ಜನ ಗ್ರಾಮೀಣ ಅಂಚೆ ನೌಕರರು ಅನಿರ್ಧಿಷ್ಟವಧಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸರಕಾರ ಮತ್ತು ಅಂಚೆ ಇಲಾಖೆ ಈ ತಕ್ಷಣವೇ ನಮ್ಮ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲವಾದರೆ ಈಡೇರುವವರೆಗೂ ಅನಿರ್ಧಿಷ್ಟಾವಧಿ ಮುಷ್ಕರ ಮಾಡುವುದಾಗಿ ಎಚ್ಚರಿಸಿದರು.
ಮುಷ್ಕರದಲ್ಲಿ ಅಖಿಲ ಭಾರತ ಅಂಚೆ ನೌಕರರ ಸಂಘ ಗ್ರಾಮೀಣ ಅಂಚೆ ನೌಕರರು ಎಐಪಿಇಯುಜಿಡಿಎಸ್ (ಎನ್ಎಫ್ಪಿಇ) ಅಧ್ಯಕ್ಷ ಕುಮಾರ್, ರಾಷ್ಟ್ರೀಯ ಅಂಚೆ ನೌಕರರ ಸಂಘ, ಗ್ರಾಮೀಣ ಅಂಚೆ ನೌಕರರಾದ (ಎನ್ಯುಜಿಡಿಎಸ್) (ಎಫ್ಎನ್ಪಿಓ) ಅಧ್ಯಕ್ಷ ಹೊನ್ನೇಗೌಡ, ಜಿ.ಬಿ. ಕಾಳೀಂಗೆಗೌಡ ಇತರರು ಭಾಗವಹಿಸಿದ್ದರು.