ಸೋಮವಾರಪೇಟೆ: ಕಾರ್ಮಿಕ ಮಹಿಳೆಯ ಕಡಿದು ಕೊಲೆ
ಸೋಮವಾರಪೇಟೆ,ಮೇ.23: ಕಾರ್ಮಿಕ ಮಹಿಳೆಯೊಬ್ಬಳು ಲೈನ್ ಮನೆಯಲ್ಲಿ ವಾಸವಾಗಿದ್ದ ಇನ್ನೋರ್ವ ಮಹಿಳೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ವಳಗುಂದ ಗ್ರಾಮದಲ್ಲಿ ನಡೆದಿದೆ.
ಮಸಗೋಡು ಗ್ರಾಮದ ಪಿ.ಪಿ.ರಾಜು ಎಂಬವರ ಪತ್ನಿ ಉಮಾವತಿ(45) ಎಂಬ ಮಹಿಳೆ ಕೊಲೆಯಾಗಿದ್ದು, ವಳಗುಂದ ಗ್ರಾಮದಲ್ಲಿರುವ ಸಾಗರ್ ಅವರ ಲೈನ್ಮನೆಯ ನಿವಾಸಿ ಆನಂದ ಎಂಬವರ ಪತ್ನಿ ಪುಷ್ಪ(46) ಕೊಲೆ ಆರೋಪಿ.
ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಜ್ವರದಿಂದ ಬಳಲುತ್ತಿದ್ದ ಉಮಾವತಿ ಲೈನ್ ಮನೆಯ ಮುಂದಿನ ಕೊಠಡಿಯಲ್ಲಿ ಮಲಗಿದ್ದು, ಅಲ್ಲಿಗೆ ಆಗಮಿಸಿದ ಪುಷ್ಪ, ಲೈನ್ಮನೆಯಿಂದ ಹೋಗುವಂತೆ ಉಮಾವತಿಗೆ ತಾಕೀತು ಮಾಡಿದ್ದಾಳೆ. ಈ ಸಂದರ್ಭ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಆರೋಪಿ ಪುಷ್ಪ ಕತ್ತಿಯಿಂದ ಉಮಾವತಿಯ ಹಣೆಯ ಭಾಗಕ್ಕೆ ಕಡಿದಿದ್ದಾಳೆ. ಗಾಯಾಳುವಿನ ಕಿರುಚಾಟವನ್ನು ಕೇಳಿದ ಕಾರ್ಮಿಕರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮೈಸೂರಿಗೆ ಕರೆದೊಯ್ದಿದ್ದಾರೆ. ನಂತರ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಬುಧವಾರ ಬೆಳಿಗ್ಗಿನ ಜಾವ ಮೃತಪಟ್ಟಿದ್ದಾಳೆ. ಮೃತಳ ಪತಿ ರಾಜು ನೀಡಿದ ದೂರಿನನ್ವಯ ಪಟ್ಟಣದ ಠಾಣೆಯಲ್ಲಿ ಕೊಲೆ ಮೊಕದ್ದಮೆ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ