ತುಮಕೂರು: ಕೋರ್ಟ್ ಕಟ್ಟಡದ ಮೂರನೇ ಅಂತಸ್ತಿನಿಂದ ಹಾರಿದ ವಿಚಾರಣಾಧೀನ ಕೈದಿ ಮೃತ್ಯು
ತುಮಕೂರು,ಮೇ.26: ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗಿದ್ದ ಖೈದಿಯೊಬ್ಬ ಕೋರ್ಟ್ ಕಟ್ಟಡದ 3ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ.
ಖೈದಿಯನ್ನು ಚಂದ್ರಯ್ಯ (29) ಎಂದು ಗುರುತಿಸಲಾಗಿದ್ದು,ಗುಬ್ಬಿ ತಾಲೂಕಿನ, ಚೇಳೂರು ಹೋಬಳಿಯ ನಾಗಲಾಪುರ ಗ್ರಾಮದವನಾಗಿದ್ದಾನೆ. ಕಟ್ಟಡದಿಂಡ ಜಿಗಿದ ಖೈದಿಗೆ ಗಂಭೀರ ಗಾಯವಾಗಿದ್ದು,ತಕ್ಷಣ ಅವನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬದುಕುಳಿಯಲಿಲ್ಲ.
ಚೇಳೂರು ಪೋಲೀಸ್ ಠಾಣೆಯಲ್ಲಿ ಚಂದ್ರಪ್ಪನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. 2017ರಲ್ಲಿ 6 ವರ್ಷದ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದು, ಇಂದು ನ್ಯಾಯಾಲಯಗಳ ಸಂಕೀರ್ಣಕ್ಕೆ ವಿಚಾರಣೆಗಾಗಿ ಬಂಧೀಖಾನೆ ಇಲಾಖೆಯ ಪೊಲೀಸರು ಕರೆತಂದಿದ್ದರು.
ಇದೇ ಪ್ರಕರಣದ ವಿಚಾರಣೆ ಶನಿವಾರ ತುಮಕೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರಲಾಗಿತ್ತು. ನ್ಯಾಯಾಧೀಶರು ವಿಚಾರಣೆ ದಿನಾಂಕ ಮುಂದೂಡಿದ ಬಳಿಕ ಕೊಠಡಿಯಿಂದ ಹೊರ ಬಂದ ಖೈದಿ ಚಂದ್ರಯ್ಯ, ತನ್ನ ಕುಟುಂಬದವರನ್ನು ನೋಡಿ, ಹತಾಶೆಗೆ ಒಳಗಾಗಿ ಕೋರ್ಟ್ ಆವರಣದಿಂದ ಕೆಳಕ್ಕೆ ಜಿಗಿದಿದ್ದಾನೆ ಎಂದು ಹೇಳಲಾಗುತ್ತಿದೆ.