ನಾನು ಕಾಂಗ್ರೆಸ್ ಪಕ್ಷದವರ ಮುಲಾಜಿನಲ್ಲಿದ್ದೇನೆ : ಸಿಎಂ ಕುಮಾರಸ್ವಾಮಿ
ಬೆಂಗಳೂರು, ಮೇ 27 : ನಾನು ರಾಜ್ಯದ ಆರೂವರೆ ಕೋಟಿ ಜನರ ಮುಲಾಜಿನಲ್ಲಿ ಇಲ್ಲ.ಬದಲಾಗಿ ಕಾಂಗ್ರೆಸ್ ಪಕ್ಷದವರ ಮುಲಾಜಿನಲ್ಲಿದ್ದೇನೆ ಎಂದು ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನಗೆ ಒಂದು ವಾರ ಸಮಯ ಕೊಡಿ . ಸಚಿವ ಸಂಪುಟ ವಿಸ್ತರಣೆ ಬಳಿಕ ಸಾಲ ಮನ್ನಾ ವಿಚಾರದ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಸಾಲಮನ್ನಾ ಮಾಡದಿದ್ದರೆ ರಾಜೀನಾಮೆ ನೀಡಲಿ ಎಂಬ ಒತ್ತಾಯ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದ ಕುಮಾರಸ್ವಾಮಿ ನನ್ನಲ್ಲಿ ಯಾರೋಬ್ಬರು ರಾಜೀನಾಮೆ ಕೇಳುವ ಅಗತ್ಯವಿಲ್ಲ. ನಾನು ಕುರ್ಚಿಗೆ ಅಂಟಿಕೊಂಡು ಕೂತಿಲ್ಲ. ರೈತರ ಸಾಲ ಮಾಡಿಲ್ಲವೆಂದರೆ ರಾಜೀನಾಮೆ ನೀಡುತ್ತೇನೆ ಎಂದರು.
ಕಾಂಗ್ರೆಸ್ ನವರು ಹಣಕಾಸು ಖಾತೆಯನ್ನು ಕೇಳಿದ್ದಾರೆ. ಸಮ್ಮಿಶ್ರ ಸರಕಾರದಲ್ಲಿ ಪ್ರಮುಖ ಖಾತೆಗಳನ್ನು ಕೇಳುವುದು ಸಹಜ ಪ್ರಕ್ರಿಯೆ ಇದರಲ್ಲಿ ಯಾವುದೇ ಫೈಟ್ ಇಲ್ಲ. ಖಾತೆ ಹಂಚಿಕೆ ಮುಂದೆ ತೀರ್ಮಾನವಾಗಬೇಕಿದೆ ಎಂದು ಹೇಳಿದರು.
ನನಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದ ಬುಲಾವ್ ಬಂದಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಬಂದಿದೆ. ಆದರೆ ನಾನು ಅವರಲ್ಲಿ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಂದು ಸ್ಪಷ್ಟನೆ ನೀಡಿದರು.
ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ವಿಚಾರ ತಿಳಿಸಿದ ಸಿಎಂ ಕುಮಾರಸ್ವಾಮಿ ಇದು ಸೌಜನ್ಯಯುತ ಭೇಟಿ . ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಸಹಾಯ, ಸಹಕಾರ ಅಗತ್ಯ. ಈ ಕಾರಣಕ್ಕಾಗಿ ಪ್ರಧಾನಿ ಅವರನ್ನು ಭೇಟಿಯಾಗುವುದಾಗಿ ತಿಳಿಸಿದರು.