ನಿಫಾಹ್ ವೈರಸ್ ಬಗ್ಗೆ ಆತಂಕ ಬೇಡ: ಚಿಕ್ಕಮಗಳೂರು ಜಿಲ್ಲಾಧಿಕಾರಿ
ಚಿಕ್ಕಮಗಳೂರು, ಮೇ 30: ಜಿಲೆಯಲ್ಲಿ ನಿಫಾಹ್ ವೈರಸ್ ರೋಗ ಈವರೆಗೆ ಕಂಡುಬಂದಿಲ್ಲ ಯಾವುದೇ ಶಂಕಿತ ಪ್ರಕರಣಗಳು ಸಹ ವರದಿಯಾಗಿಲ್ಲ. ಸಾರ್ವಜನಿಕರು ನಿಫಾ ವೈರಸ್ ರೋಗದ ಬಗ್ಗೆ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇವರು ನಿಫಾ ವೈರಸ್ ಮತ್ತು ಇತರೇ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತ ಅಂತರ್ ಇಲಾಖಾ ಸಮನ್ವಯ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಿಫಾ ವೈರಸ್ ರೋಗಕ್ಕೆ ಯಾವುದೇ ಚಿಕಿತ್ಸೆಯಾಗಲೀ ಅಥವಾ ಲಸಿಕೆಯಾಗಲೀ ಲಭ್ಯವಿಲ್ಲ, ಈ ರೋಗ ಬರದಂತೆ ನೋಡಿಕೊಳ್ಳುವುದಕ್ಕೆ ಮುಂಜಾಗೃತೆ ವಹಿಸುವುದೇ ಮುಖ್ಯವಾಗಿದೆ ಎಂದರು.
ಈ ರೋಗವು ಸದ್ಯ ಕೇರಳ ರಾಜ್ಯದ ಕೋಝಿಕೊಡ್, ಮಲಪುರಂ, ವಯನಾಡ್ ಹಾಗೂ ಕನ್ನೂರ್ ಜಿಲ್ಲೆಗಳನ್ನು ನಿಫಾ ವೈರಸ್ ರೋಗ ಹರಡುವ ಅಪಾಯಕಾರಿ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಜಿಲ್ಲೆಗಳಿಗೆ ತಾತ್ಕಲಿಕ ಪ್ರವಾಸ ಕೈಗೊಳ್ಳದಂತೆ ಕೇರಳದಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಮೇಲೆ ನಿಗಾವಹಿಸಬೇಕೆಂದರು.
ಜಿಲ್ಲಾ ಸರ್ವೇಕ್ಷಣಾ ವರ್ಷದ ವೈದ್ಯಾಧಿಕಾರಿ ಸಭೆಗೆ ಮಾಹಿತಿ ನೀಡುತ್ತಾ, ಇದೊಂದು ಹೊಸದಾಗಿ ಕಂಡು ಬಂದ ವೈರಾಣು ಸೋಂಕು ಇದಾಗಿದೆ. ತಲೆನೋವು, ತಲೆ ಸುತ್ತುವಿಕೆ, ದಿಗ್ಬ್ರಮೆ, ಮಾನಸಿಕ ಗೊಂದಲ ಜ್ಞಾನ ತಪ್ಪುವುದು ಕುಂಡು ಬರುತ್ತದೆ. ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಿಸಾಡಿದ ಹಣ್ಣು ಹಂಪಲುಗಳನ್ನು ಸೇವಿಸುವುದರ ಮೂಲಕ ಇತರೆ ಪಕ್ಷಿಗಳಿಗೆ ಹರಡುತ್ತದೆ. ಸೋಂಕಿತ ಪಕ್ಷಿಗಳಿಂದ ಇದೆ ಪಕ್ಷಿಗಳಿಗೆ ಮಲ, ಮೂತ್ರ ಜೊಲ್ಲು ಮತ್ತು ರಕ್ತ ಇವುಗಳ ಸಂಪರ್ಕದಿಂದ ಸೋಂಕಿತ ಬಾವುಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ, ಸೋಂಕಿತ ಮನುಷ್ಯನ ಮಲ, ಮೂತ್ರ , ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಆರೋಗ್ಯವಂತ ಮುನುಷ್ಯನಿಗೆ ಹರಡುತ್ತದೆ. ಮನುಷ್ಯರಲ್ಲಿ ಜ್ವರ, ತಲೆನೋವು, ತಲೆ ಸುತ್ತುವಿಕೆ, ದಿಗ್ಬ್ರಮೆ, ಮಾನಸಿಕ ಗೊಂದಲ ಜ್ಞಾನ ನಿಫಾ ರೋಗದ ಲಕ್ಷಣಗಳು ಕಂಡುಬಂದಲ್ಲಿ ಎಲೀಸಾ ಆಧಾರಿತ ರಕ್ತ ಪರೀಕ್ಷೆಯಿಂದ ನಿಫಾ ವೈರಾಣುಗಳನ್ನು ಗುರುತಿಸಬಹುದಾಗಿದೆ ಎಂದರು.
ನಿಫಾ ವೈರಾಣು ಜ್ವರವನ್ನು ತಡೆಗಟ್ಟಲು ಪಕ್ಷಿಗಳು ಮತ್ತು ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು. ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ/ನೀರಾ ಕುಡಿಯಬಾರದು. ತಾಜಾ ತಾಳೆ ಹಣ್ಣಿನ ರಸವನ್ನು ಸೇವಿಸಬಾರದು. ಹಣ್ಣು ಮತ್ತು ಒಣ ಖರ್ಜೂರ ಸೇವಿಸು ಮೊದಲು ಸಂಪೂರ್ಣವಾಗಿ ಶುದ್ಧೀಕರಿಸಿ ತಿನ್ನಬೇಕು. ಅನಾರೋಗ್ಯದ ಹಂದಿಗಳನ್ನು, ಪ್ರಾಣಿಗಳೊಂದಿಗಿನ ನೇರ ಸಂಪರ್ಕ ತಪ್ಪಿಸಬೇಕು. ತೆರೆದ ಬಾವಿಗಳಿಗೆ ಬಾವಲಿಗಳು ಪ್ರವೇಶಿಸದಂತೆ ಬಾವಿಗಳಿಗೆ ಜಾಲರಿಗಳನ್ನು ಅಳವಡಿಸಬೇಕು. ನಿಫಾ ವೈರಸ್ ರೋಗ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ಅನ್ನು ತೆರೆಯಬೇಕು. ಆರೋಗ್ಯ ಇಲಾಖೆಯಿಂದ ನಿಫಾ ವೈರಸ್ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತ ಕರಪತ್ರಗಳನ್ನು ಮುದ್ರಿಸಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವರಿಸಬೇಕು ಎಂದು ಜಿಲ್ಲಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜು ಚೇಂಗಟ್ಟಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಲ್ಲಿಕಾರ್ಜುನಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.