ಮೈಸೂರು: ರಾಜಕಾಲುವೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್
ಮೈಸೂರು,ಮೇ.31: ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಮಳೆ ಆರಂಭವಾದ ಹಿನ್ನಲೆಯಲ್ಲಿ ಮೈಸೂರು ನಗರದ ಹಲವಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ನಗರದಲ್ಲಿ ಹಾದುಹೋಗುವ ರಾಜಾಕಾಲುವೆಗಳನ್ನು ಗುರುವಾರ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ವೀಕ್ಷಣೆ ಮಾಡಿದರು. ಕನಕಗಿರಿಯಲ್ಲಿರುವ ರಾಜಕಾಲುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಹಿಂದೆ ಮಳೆ ಬಂದಾಗ ರಾಜಕಾಲುವೆ ಒತ್ತುವರಿ ಹಿನ್ನಲೆಯಲ್ಲಿ ಕನಕಗಿರಿಗೆ ನುಗ್ಗಿದ ಮಳೆ ನೀರು ಅವಾಂತರ ಸೃಷ್ಟಿಸಿತ್ತು. ಈ ಪರಿಣಾಮ ಕನಕಗಿರಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತಲ್ಲದೇ, ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿತ್ತು. ಈ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಾಜಕಾಲುವೆ ಕಾಮಗಾರಿಗೆ ಸೂಚನೆ ನೀಡಿದ್ದರು. ಇಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಭೇಟಿ ನೀಡಿ ಕಾಮಗಾರಿ ಹೇಗೆ ನಡೆದಿದೆ ಎಂಬುದನ್ನು ವೀಕ್ಷಿಸಿ, ಮಳೆ ಬಂದಲ್ಲಿ ಯಾವ ರೀತಿ ಮುಂಜಾಗ್ರತೆ ಕ್ರಮ ವಹಿಸಬೇಕೆನ್ನುವ ಕುರಿತು ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಗಳ ಜೊತೆ ಮಹಾನಗರ ಪಾಲಿಕೆಯ ಸದಸ್ಯರು, ಅಧಿಕಾರಿಗಳು ಇದ್ದರು.