ಬೆಳಗಾವಿ: ಬೈಕ್ನೊಂದಿಗೆ ಪಾಳುಬಾವಿಗೆ ಬಿದ್ದು ಸವಾರ ಮೃತ್ಯು
ಬೆಳಗಾವಿ, ಜೂ. 2: ಶರವೇಗದಲ್ಲಿ ಸಾಗುತ್ತಿದ್ದ ಬೈಕ್ ಸವಾರ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಬೈಕ್ನೊಂದಿಗೆ ಬಾವಿಗೆ ಬಿದ್ದು ಮೃತಪಟ್ಟ ದುರ್ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಮಠದ ಗಲ್ಲಿಯಲ್ಲಿ ಶನಿವಾರ ಸಂಭವಿಸಿದೆ.
ಮೃತಪಟ್ಟ ಬೈಕ್ ಸವಾರನನ್ನು ಸ್ಥಳೀಯ ನಿವಾಸಿ ತಾತ್ಯಾಸಾಬ್ ಪಾಟೀಲ್(58) ಎಂದು ಗುರುತಿಸಲಾಗಿದೆ. ಶನಿವಾರ ಟಿವಿಎಸ್ ಎಕ್ಸೃ್ಎಲ್ ಬೈಕ್ ನಲ್ಲಿ ತಾತ್ಯಾಸಾಬ ಪಾಟೀಲ್ ತಮ್ಮ ಮನೆಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣದ ಮಧ್ಯದಲ್ಲಿಯೇ ಇರುವ ಬಾಳು ಬಿದ್ದ ಬಾವಿಗೆ ತಾತ್ಯಾಸಾಬ್ ಬಿದ್ದಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಬಾವಿಗೆ ಇಳಿಯುಲು ಹಿಂದೇಟು ಹಾಕಿದ್ದಾರೆ. ಕೂಡಲೇ ಪೊಲೀಸ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ ತಾತ್ಯಾಸಾಬ ಮೃತಪಟ್ಟಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತಾತ್ಯಾಸಾಬ್ ಪಾಟೀಲ ಮೃತದೇಹ ಹಾಗೂ ಬೈಕ್ಅನ್ನು ಹೊರ ತೆಗೆದಿದ್ದಾರೆ. ಬಾವಿಗೆ ತಡೆಗೋಡೆ ಇಲ್ಲದ ಕಾರಣ ಬೈಕ್ ಸವಾರ ಬಾವಿಗೆ ಬಿದ್ದಿದ್ದು, ಈ ಘಟನೆಗೆ ಪುರಸಭೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಸ್ಥಳೀಯರು ಆರೋಪಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ಸರಕಾರ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಸಂಬಂಧ ಇಲ್ಲಿನ ಸಂಕೇಶ್ವರ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ.