ಶೋಭಾ ಕರಂದ್ಲಾಜೆ ವಿರುದ್ಧ ದೂರು ದಾಖಲು
ಹಿಂದೂ ಭಾವನೆಗಳಿಗೆ ಧಕ್ಕೆ: ಆರೋಪ
ಬೆಂಗಳೂರು, ಜೂ.8: ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ವಿರುದ್ಧ ಶುಕ್ರವಾರ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿಂದೂ ಧರ್ಮದ ಸನ್ಯಾಸಿಗಳಿಗೆ ಶೋಭಾ ಕರಂದ್ಲಾಜೆ ಅಪಮಾನ ಮಾಡಿದ್ದಾರೆ. ಹೀಗಾಗಿ, ಇವರ ವಿರುದ್ಧ ಕಲಂ 298ರ ಅಡಿ ಪ್ರಕರಣ ದಾಖಲಿಸಿಕೊಂಡು, ಕ್ರಮ ಜರುಗಿಸಬೇಕು ಎಂದು ದೂರುದಾರ ವಕೀಲ ಎಸ್.ನಟರಾಜ್ ಶರ್ಮಾ ಒತ್ತಾಯಿಸಿದ್ದಾರೆ.
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಒಬ್ಬ ಸನ್ಯಾಸಿ, ಅವರಿಗೆ ವಯಸ್ಸಾಗಿದೆ. ಅವರು ಟಿವಿ ನೋಡಲ್ಲ ಎಂದೆಲ್ಲಾ ಶೋಭ ಕರಂದ್ಲಾಜೆ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳಿಂದ ಸನ್ಯಾಸಿಗಳಿಗೆ ನೋವಾಗಿದೆ ಎಂದು ಅವರು ಹೇಳಿದರು.
ಗಂಗಾ ಶುದ್ಧೀಕರಣ ಯೋಜನೆ ಹಾಗೂ ಕಪ್ಪು ಹಣ ವಿಚಾರದಲ್ಲಿ ಕುರಿತು ಕೇಂದ್ರ ಸರಕಾರದ ವಿರುದ್ಧ ಪೇಜಾವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ, ಶ್ರೀಗಳ ಬಗ್ಗೆ ಬೇಜಾಬ್ದಾರಿ ಹೇಳಿಕೆ ನೀಡಿ ಅಪಮಾನ ಮಾಡಿದ್ದಾರೆ. ಇವರ ವಿರುದ್ಧ ಕ್ರಮ ಜರುಗಿಸಬೇಕೆಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದರು.