ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಜೆಡಿಎಸ್ನ ಮರಿತಿಬ್ಬೇಗೌಡಗೆ ಗೆಲುವು
ಸತತ ನಾಲ್ಕನೇ ಬಾರಿಗೆ ಮೇಲ್ಮನೆ ಪ್ರವೇಶ
ಮೈಸೂರು,ಜೂ.12: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದ ಮರಿತಿಬ್ಬೇಗೌಡ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎಂ.ಲಕ್ಷ್ಮಣ ಅವರಿಗಿಂತ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಎಲಿಮಿನೇಷನ್ ಪ್ರಕ್ರಿಯೆಯ ನಂತರವೂ ಗೆಲುವು ಘೋಷಣೆಗೆ ಬೇಕಾದ ಖೋಟಾ ಯಾವೊಬ್ಬ ಅಭ್ಯರ್ಥಿಗೂ ಸಿಕ್ಕಿರಲಿಲ್ಲ. ಆದ್ದರಿಂದ ಕೊನೆಯದಾಗಿ ಉಳಿದುಕೊಂಡ ಇಬ್ಬರು ಅಭ್ಯರ್ಥಿಗಳ ಪೈಕಿ ಕಡಿಮೆ ಮತ ಪಡೆದಿರುವ ಎಂ. ಲಕ್ಷ್ಮಣ ಅವರನ್ನು ಎಲಿಮಿನೇಟ್ ಮಾಡಲಾಗಿದ್ದು, ಮರಿತಿಬ್ಬೇಗೌಡ ಅವರು ಗೆಲುವು ಸಾಧಿಸಿದಂತಾಗಿದೆ.
ಮೊದಲ ಸುತ್ತಿನಿಂದಲೂ ಮುನ್ನಡೆ ಸಾಧಿಸುತ್ತಾ ಬಂದಿದ್ದ ಮರಿತಿಬ್ಬೇಗೌಡ ಕೊನೆಯ, ಒಂಬತ್ತನೇ ಸುತ್ತಿನ ವೇಳೆ 11022 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಆ ಮೂಲಕ ಸತತವಾಗಿ ನಾಲ್ಕನೇ ಬಾರಿಗೆ ಗೆಲವು ಸಾಧಿಸಿದ ದಾಖಲೆ ನಿರ್ಮಿಸಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರ:
ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯ ಮತ ಎಣಿಕೆ ಅಂತಿಮಗೊಂಡಿದ್ದು, ಕೊನೆಯ ಒಂದು ಸುತ್ತು ಮಾತ್ರ ಬಾಕಿ ಇದೆ. ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಹತ್ತನೇ ಸುತ್ತಿನಲ್ಲೂ (6621 ಮತ) ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಗಣೇಶ್ ಕಾರ್ಣಿಕ್ 5579 ಮತಗಳನ್ನು ಪಡೆದಿದ್ದಾರೆ.
ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗಬೇಕಿದ್ದು, ಪ್ರಾಶಸ್ತ್ಯದ ಮೂಲಕ ಗೆಲುವಿಗೆ ಬೇಕಾದ ಮತಗಳನ್ನು ಹಂಚಿಕೆ ಮಾಡಲಾಗುತ್ತದೆ. ಹಾಗಾಗಿ ಗೆಲುವು ಯಾರಿಗೆ ಎಂದು ಹೇಳಲಾಗದಿದ್ದರೂ ಜೆಡಿಎಸ್ ಪಕ್ಷದ ಎಸ್.ಎಲ್.ಭೋಜೇಗೌಡ ಮುಂದಿದ್ದಾರೆ.
ದಕ್ಷಿಣ ಪದವೀಧರರ ಕ್ಷೇತ್ರದ ಮತ ಎಣಿಕೆ ಕೂಡ ನಡೆಯುತ್ತಿದ್ದು, ಮಧ್ಯರಾತ್ರಿ ಅಥವಾ ನಾಳೆ ಅದರ ಫಲಿತಾಂಶ ಹೊರಬೀಳಲಿದೆ.