ಬೆಂಗಳೂರು ಹೈಕೋರ್ಟ್ ವಕೀಲರ ಸಂಘದಿಂದ ಇಫ್ತಾರ್ ಕೂಟ
ಬೆಂಗಳೂರು, ಜೂ.13: ಹೈಕೋರ್ಟ್ ವಕೀಲರ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ಇಫ್ತಾರ್ ಕೂಟವು ಬೆಂಗಳೂರಿನ ಕನ್ನಿಂಗಾಮ್ ರಸ್ತೆಯಲ್ಲಿರುವ ಫಿರೋಝ್ ಎಸ್ಟೇಟ್ ಸಭಾಂಗಣದಲ್ಲಿ ಜರುಗಿತು.
ಇಫ್ತಾರ್ ಕಾರ್ಯಕ್ರಮದ ಮುಂಚಿತವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡಿದ ಇಹ್ಸಾನ್ ರಾಜ್ಯಾಧ್ಯಕ್ಷರಾದ ಮೌಲಾನ ಎನ್.ಕೆ.ಎಂ ಶಾಫಿ ಸಅದಿಯವರು, ಪ್ರತಿಯೊಂದು ಧರ್ಮವು ಇಲ್ಲಿ ಶಾಂತಿ, ಸೌಹಾರ್ದತೆಯನ್ನು ಬೋಧಿಸುವಾಗ ಧರ್ಮದ ಹೆಸರಿನಲ್ಲಿ ನಡೆಯುವ ಅನೈಕ್ಯತೆ, ಅನಾಚಾರಗಳು ಖಂಡನೀಯವಾಗಿದೆ. ಧರ್ಮಗಳ ಮೌಲ್ಯವನ್ನು ಅರಿತು ಜೀವಿಸಿದರೆ ಶಾಂತಿಯುತ, ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಪ್ರವಾದಿ ಸ.ಅ ರವರು ಜಗತ್ತಿಗೆ ಶಾಂತಿಯ ಸಂದೇಶವನ್ನು ಬೋಧಿಸಿ, ಜನರನ್ನು ಕೆಡುಕಿನಿಂದ ಒಳಿತಿನೆಡೆಗೆ ಪ್ರೇರೇಪಿಸುವಂತಹ ಸಂದೇಶವನ್ನು ನೀಡಿದ್ದಾರೆ. ರಂಝಾನ್ ತಿಂಗಳು ಕೇವಲ ಉಪವಾಸದಿಂದ ಇರಲು ಮಾತ್ರ ಸೀಮಿತವಾಗಿರುವಂತದಲ್ಲ, ಬದಲಾಗಿ ಒಬ್ಬ ಸತ್ಯ ವಿಶ್ವಾಸಿಯು ತನ್ನ ಮನಸ್ಸುಗಳನ್ನು ಕೆಡುಕಿನಿಂದ ನಿಯಂತ್ರಿಸಲ್ಪಡಲು ಇರುವಂತಹ ತಿಂಗಳಾಗಿದೆ ಎಂದು ಹೇಳಿದರು.
ಇಫ್ತಾರ್ ಕೂಟದಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕವಾದ ನವಾಝ್ ಮುಹಮ್ಮದ್, ಅಡ್ವಕೇಟ್ ಜನರಲ್ ಅಸಿಸ್ಟೆಂಟ್ ಪೊಣ್ಣನ್ನ, ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾದ ರಂಗನಾಥ್, ಹಿರಿಯ ವಕೀಲರಾದ ಬಿ.ವಿ ಆಚಾರ್ಯ, ನಿವೃತ್ತ ಸುಪ್ರೀಂ ಕೋರ್ಟ್ ಜಡ್ಜ್ ಗೋಪಾಲಗೌಡ, ನಿವೃತ್ತ ಜಡ್ಜ್ ಗಂಗಾಧರಯ್ಯ, ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮಾಜಿ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ರಿಯಾಝ್ ಖಾನ್ ಸಹಿತ ಇನ್ನಿತರ ಅನೇಕರು ಉಪಸ್ಥಿತರಿದ್ದರು.