ಮಡಿಕೇರಿ: ವಾಹನದ ಮೇಲೆ ಮರ ಬಿದ್ದು ಕಾರ್ಮಿಕ ಮೃತ್ಯು
ಮಡಿಕೇರಿ, ಜೂ.19: ಟಾಟಾ ಏಸ್ ವಾಹನದ ಮೇಲೆ ಸಿಲ್ವರ್ ಮರ ಬಿದ್ದು ಕಾರ್ಮಿಕನೋರ್ವ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಲಿಬೆಟ್ಟ ತಿತಿಮತಿ ಸಂಪರ್ಕ ರಸ್ತೆಯ ಹೊಸಳ್ಳಿ ಬಳಿ ನಡೆದಿದೆ.
ಅನುಗೋಡು ನಿವಾಸಿ ರಾಜು (35) ಮೃತಪಟ್ಟ ವ್ಯಕ್ತಿ. ಪಾಲಿಬೆಟ್ಟ ಹೊಸಳ್ಳಿ ಎಂಬಲ್ಲಿ ತೋಟ ಕೆಲಸ ಮುಗಿಸಿ ಅನುಗೋಡುವಿನ ತಮ್ಮ ಊರಿಗೆ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಸಿಲ್ವರ್ ಮರ ಬಿದ್ದು, ಈ ದುರ್ಘಟನೆ ಸಂಭವಿಸಿದೆ. ವಾಹನದಲ್ಲಿ ಸುಮಾರು 13 ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಚಾಲಕನ ಸಮೀಪವೇ ಕುಳಿತಿದ್ದ ರಾಜುವಿನ ತಲೆಯ ಭಾಗಕ್ಕೆ ಮರ ಬಿದ್ದ ಪರಿಣಾಮ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಭಾಗದಲ್ಲಿ ಕುಳಿತಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಇವರು ದುಬಾರೆ ಎಸ್ಟೇಟ್ನ ಕಾರ್ಮಿಕರಾಗಿದ್ದು, ಅನುಗೋಡು ನಿವಾಸಿಗಳಾಗಿದ್ದಾರೆ.
ಗಾಯಾಳುಗಳಿಗೆ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.