ವಸತಿ ಯೋಜನೆ: ಆರ್ಥಿಕ ಸಮಸ್ಯೆ ಇರುವ ಫಲಾನುಭವಿಗಳಿಗೆ ಸಹಕಾರಿ ಬ್ಯಾಂಕ್ನಿಂದ ಹಣ; ಯು.ಟಿ.ಖಾದರ್
ಬೆಂಗಳೂರು, ಜೂ.20: ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ನಿರ್ಮಿಸಿಕೊಳ್ಳಲು ಆರ್ಥಿಕ ಸಮಸ್ಯೆ ಇರುವ ಫಲಾನುಭವಿಗಳಿಗೆ ಸಹಕಾರಿ ಬ್ಯಾಂಕ್ನಿಂದ ಹಣ ಕೊಡಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಇಂದಿಲ್ಲಿ ಹೇಳಿದರು.
ಬುಧವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರದ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಇದರಲ್ಲಿ 8.50 ಲಕ್ಷ ಮನೆಗಳು ಸಂಪೂರ್ಣವಾಗಿ ನಿರ್ಮಾಣವಾಗಿವೆ. ಆದರೆ, ಸರಕಾರದಿಂದ ಮಂಜೂರಾದ ಮನೆಗಳನ್ನು ನಿರ್ಮಿಸಿಕೊಳ್ಳಲು ಆರ್ಥಿಕ ತೊಂದರೆ ಇರುವ ಫಲಾನುಭವಿಗಳಿಗೆ ಸಹಕಾರಿ ಬ್ಯಾಂಕ್ಗಳಿಂದ ತ್ವರಿತಗತಿಯಲ್ಲಿ ಹಣ ಮಂಜೂರು ಮಾಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಫಲಾನುಭವಿಗಳಿಗೆ ಮಂಜೂರಾಗುವ ಮೊದಲ ಕಂತಿನ ಹಣವನ್ನು ನೇರವಾಗಿ ಸಹಕಾರಿ ಬ್ಯಾಂಕ್ಗೆ ಬಿಡುಗಡೆ ಮಾಡಲಾಗುತ್ತದೆ. ಈ ಕುರಿತು ಸಹಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಖಾದರ್ ಮಾಹಿತಿ ನೀಡಿದರು.
‘ದ್ವೇಷ ರಾಜಕಾರಣ’
ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಐಟಿ ಇಲಾಖೆ ನೋಟಿಸ್ ಜಾರಿಗೊಳಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರದ ಎನ್ಡಿಎ ಸರಕಾರ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ, ಸಿಬಿಐ ದಾಳಿ ನಡೆಸುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ. ತಪ್ಪು ಇದ್ದಲ್ಲಿ ಕಾನೂನು ರೀತಿಯ ಕ್ರಮಕೈಗೊಳ್ಳಬಹುದು. ಆದರೆ, ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ.
-ಯು.ಟಿ.ಖಾದರ್, ವಸತಿ ಸಚಿವ