ಕೇಂದ್ರದಿಂದ ಸರಕಾರಿ ಸಂಸ್ಥೆಗಳ ದುರುಪಯೋಗ: ಡಿಸಿಎಂ ಡಾ.ಜಿ.ಪರಮೇಶ್ವರ್
ತುಮಕೂರು,ಜೂ.20: ಚುನಾವಣಾ ಪೂರ್ವದಲ್ಲಿ ಕೇಂದ್ರ ಸರಕಾರ ಕಾಂಗ್ರೆಸ್ ಶಾಸಕರ ಮೇಲೆ ತನ್ನ ಅಧೀನದಲ್ಲಿರುವ ಸಂಸ್ಥೆಗಳ ಮೂಲಕ ಮಾಡಿದ ಅಧಿಕಾರ ದುರ್ಬಳಕೆಯನ್ನು ಚುನಾವಣೆ ನಂತರವೂ ಮುಂದುವರೆಸಿದೆ ಎಂದು ಉಪಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರು ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಚುನಾವಣೆ ಪೂರ್ವದಲ್ಲಿ ಐಟಿ, ಸಿಬಿಐ ಮತ್ತಿತರರ ಕೇಂದ್ರ ಸರಕಾರದ ಅಧೀನದಲ್ಲಿರುವ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಶಾಸಕರನ್ನು ಹಣಿಯುವ ಕೆಲಸ ಮಾಡಿತ್ತು. ಚುನಾವಣೆಯ ನಂತರವೂ ಇದನ್ನು ಮುಂದುವರೆಸಿದೆ. ಈಗಾಗಲೇ ಐಟಿ ಸಂಸ್ಥೆ ನೀಡಿರುವ ನೊಟೀಸ್ಗೆ ಡಿ.ಕೆ.ಶಿವಕುಮಾರ್ ಕಾನೂನು ಪ್ರಕಾರ ಉತ್ತರ ನೀಡಿದ್ದಾರೆ. ಡಿಕೆಶಿ ಪರವಾಗಿ ಕಾಂಗ್ರೆಸ್ ಪಕ್ಷ ಕಾನೂನು ಹೋರಾಟ ನಡೆಸಲಿದೆ ಎಂದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ದೆಹಲಿಗೆ ನೀತಿ ಆಯೋಗದ ಸಭೆ ಮತ್ತು ವಿವಿಧ ಇಲಾಖೆಗಳ ಮಂತ್ರಿಗಳನ್ನು ಭೇಟಿಯಾಗಲು ತೆರಳಿದ್ದ ಮುಖ್ಯಮಂತ್ರಿಗಳು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ಅಂಗವಾಗಿ ಅವರನ್ನು ಭೇಟಿಯಾಗಿ ಶುಭಾಶಯ ತಿಳಿಸಿದ್ದಾರೆ. ನಾನು ಸಹ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದೇನೆ. ಇದಕ್ಕೆ ಬೇರೆ ಅರ್ಥವನ್ನು ಮಾಧ್ಯಮಗಳು ಕಲ್ಪಿಸುತ್ತಿವೆ. ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ. ಐದು ವರ್ಷ ಅಧಿಕಾರ ನಡೆಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಸಾಲ ಮನ್ನಾ ಕುರಿತಂತೆ ಈಗಾಗಲೇ ಎರಡು ಪಕ್ಷಗಳು ಒಮ್ಮತಕ್ಕೆ ಬಂದಿವೆ. ನಾಲ ಮನ್ನಾ ಮಾಡಿಯೇ ತೀರುತ್ತೇವೆ. ಆದರೆ ಎಷ್ಟು ಸಾಲ, ಯಾವ ಯಾವ ಸಾಲ ಮನ್ನಾ ಮಾಡಬೇಕು, ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೋಢೀಕರಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ. ಸದ್ಯದಲ್ಲಿಯೇ ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಮುಖ್ಯಮಂತ್ರಿಗಳು ತಿಳಿಸಲಿದ್ದಾರೆ ಎಂದು ಅವರು ಹೇಳಿದರು.