ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕೃತ್ಯಕ್ಕೆ ಮಧ್ಯಪ್ರದೇಶದ ಪಿಸ್ತೂಲು ?
ಬೆಂಗಳೂರು, ಜೂ.25: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಕೃತ್ಯಕ್ಕೆ ಬಳಕೆ ಮಾಡಲಾಗಿದ್ದ ಪಿಸ್ತೂಲು ಮಧ್ಯಪ್ರದೇಶ ರಾಜ್ಯದಿಂದ ರವಾನೆ ಆಗಿರುವ ಶಂಕೆ ಸಿಟ್(ಎಸ್ಐಟಿ) ತನಿಖಾಧಿಕಾರಿಗಳಿಗೆ ಮೂಡಿದೆ ಎನ್ನಲಾಗಿದೆ.
ಕೃತ್ಯ ನಡೆಸಿರುವ ಆರೋಪಿಗಳು, ಪಿಸ್ತೂಲು ಅನ್ನು ಮಧ್ಯಪ್ರದೇಶದಿಂದ ವಿಜಯಪುರಕ್ಕೆ ತಂದು, ಬಳಿಕ ವ್ಯವಸ್ಥಿತವಾಗಿ ಬೆಂಗಳೂರಿಗೆ ತೆಗೆದುಕೊಂಡು ಬಂದಿರುವುದಾಗಿ ಹೇಳಲಾಗುತ್ತಿದೆ. ಅಲ್ಲದೆ, ಇನ್ನಿತರೆ ಕೊಲೆಗಳ ಹಿಂದೆಯೂ ಮಧ್ಯಪ್ರದೇಶ ಪಿಸ್ತೂಲುಗಳನ್ನು ಬಳಕೆ ಮಾಡಿರುವ ಆರೋಪ ದಟ್ಟವಾಗಿದೆ.
ಎಲ್ಲಿಂದ?: ಗೌರಿ ಲಂಕೇಶ್ ಹತ್ಯೆಯ ನಂತರ ಪಿಸ್ತೂಲು ಎಲ್ಲಿಂದ ಬಂತು ಎನ್ನುವುದರ ಬಗ್ಗೆ ಸಿಟ್ ತನಿಖೆ ಮುಂದುವರೆಸಿದೆ. ಅದೇ ರೀತಿ, ಪಿಸ್ತೂಲಿನ ಗುಂಡುಗಳ ಬಗ್ಗೆಯೂ ತನಿಖೆ ಕೈಗೊಳ್ಳಲಾಗುತಿದ್ದು, ಮಧ್ಯಪ್ರದೇಶದಲ್ಲಿಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಪೊಲೀಸ್ ತಂಡ: ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮಧ್ಯಪ್ರದೇಶದ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಹೇಳಲಾಗುತಿದ್ದು, ವಿಚಾರವಾದಿಗಳ ಹತ್ಯೆ ಹಿಂದಿರುವ ದುಷ್ಕರ್ಮಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ನಿರ್ಲಕ್ಷ: ಮಹಾರಾಷ್ಟ್ರದಲ್ಲಿಯೂ ನಡೆದ ವಿಚಾರವಾದಿಗಳ ಹತ್ಯೆ ಪ್ರಕರಣಗಳಲ್ಲಿ ಇದುವರೆಗೂ ಆರೋಪಿಗಳ ಸುಳಿವು ದೊರೆಯದ ಹಿನ್ನೆಲೆ, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕೃತ್ಯವೆಸಗಿರುವ ಆರೋಪಿಗಳು ಕರ್ನಾಟಕ ಪೊಲೀಸರನ್ನು ನಿರ್ಲಕ್ಷ ಮಾಡಿಯೇ ಸಿಕ್ಕಿಬಿದ್ದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.