ನಾಗಮಂಗಲ: ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆ
ನಾಗಮಂಗಲ, ಜು.3: ಪರಿಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ಕಾರಣಕ್ಕೆ ಮನನೊಂದು ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯೋರ್ವಳು ತಾಲೂಕಿನ ಬೆಳ್ಳೂರು ಬಿಜಿಎಸ್ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಮರಡಹಳ್ಳಿ ಗ್ರಾಮದ ಜಯರಾಮೇಗೌಡ ಎಂಬುವರ ಪುತ್ರಿ ಕಾವ್ಯಶ್ರೀ(23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಆದಿಚುಂಚನಗಿರಿ ಮಠದ ಬಿಜಿಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕಾವ್ಯಶ್ರೀ ಸೋಮವಾರ ನಡೆದ ಪರೀಕ್ಷೆಯೊಂದರಲ್ಲಿ ಕಾಪಿಮಾಡಿ ಸಿಕ್ಕಿಬಿದ್ದಿದ್ದಳು ಎನ್ನಲಾಗಿದೆ. ಇದರಿಂದ ಮಂಗಳವಾರ ನಡೆದ ಪರೀಕ್ಷೆಗೂ ಕಾಲೇಜಿನಲ್ಲಿ ಅವಕಾಶ ಕಲ್ಪಿಸಿರಲಿಲ್ಲ ಎನ್ನಲಾಗಿದ್ದು, ಮನನೊಂದ ವಿದ್ಯಾರ್ಥಿನಿ ತಾನು ಉಳಿದುಕೊಳ್ಳುತ್ತಿದ್ದ ಬಾಲಕಿಯರ ಹಾಸ್ಟೆಲ್ ಕೊಠಡಿಗೆ ತೆರಳಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ವಹಿಸಲಾಗಿದೆ.