ತುಮಕೂರು: ರಸ್ತೆ ತಡೆ ನಡೆಸಲು ಮುಂದಾದ ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್
ಚಲಿಸುತ್ತಿದ್ದ ಬಸ್ಸಿನ ಅಡಿಗೆ ನುಗ್ಗಿದ ಯುವಕ
ತುಮಕೂರು,ಜು.07: ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವಿತರಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಎಬಿವಿಪಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ವಿದ್ಯಾರ್ಥಿ ನಾಯಕನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಶನಿವಾರ ರಸ್ತೆ ನಡೆಸಲು ಮುಂದಾದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎನ್ನಲಾದ ಘಟನೆ ನಡೆದಿದೆ.
ಶುಕ್ರವಾರ ನಡೆದ ಘಟನೆಯನ್ನು ಖಂಡಿಸಿ, ಪೊಲೀಸರ ಪರವಾನಗಿಯನ್ನು ಪಡೆಯದೆ ರಸ್ತೆ ತಡೆ ನಡೆಸಲು ಮುಂದಾದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಮಾತಿನ ಚಕಮುಖಿ ನಡೆದಿದೆ. ಪೊಲೀಸರ ಮನವಿಗೂ ಸ್ಪಂದಿಸದೆ ರಸ್ತೆ ತಡೆ ಮುಂದುವರೆಸಿದಾಗ ಅನಿವಾರ್ಯವಾಗಿ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ಚಲಿಸುತ್ತಿದ್ದ ಬಸ್ಸಿನ ಅಡಿಯಲ್ಲಿ ಎಬಿವಿಪಿ ಕಾರ್ಯಕರ್ತನೊಬ್ಬ ನುಗ್ಗಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಈ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಬಿವಿಪಿಯ ಮುಖಂಡರಾದ ಅಪ್ಪು ಪಾಟೀಲ್, ಚಂದನ್ ಗೋನಾಳ್ ಸೇರಿದಂತೆ 7 ವಿದ್ಯಾರ್ಥಿಗಳ ವಿರುದ್ದ ಕೇಸು ದಾಖಲಾಗಿದೆ.