ನಾಗಮಂಗಲ: ಆಟೋ ಪಲ್ಟಿಯಾಗಿ ಶಿಕ್ಷಕಿ ಮೃತ್ಯು, ನಾಲ್ವರಿಗೆ ಗಾಯ
ನಾಗಮಂಗಲ, ಜು.10: ನಾಯಿಯೊಂದು ಅಡ್ಡಬಂದ ಕಾರಣ ನಿಯಂತ್ರಣ ತಪ್ಪಿದ ಆಟೋ ಪಲ್ಟಿಯಾಗಿ ಶಾಲಾ ಶಿಕ್ಷಕಿ ಸಾವನ್ನಪ್ಪಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬೋಗಾದಿ ರಸ್ತೆಯಲ್ಲಿನ ಧರ್ಮಸ್ಥಳ ಗೇಟ್ ಬಳಿ ನಡೆದಿದೆ.
ತಟ್ಟೇಕೆರೆ ಪ್ರಾಥಮಿಕ ಶಾಲೆಯ ಶಿಕ್ಷಕಿ ಪಟ್ಟಣ ವ್ಯಾಪ್ತಿಯ ಕೆ.ಮಲ್ಲೇನಹಳ್ಳಿಯ ಕೆ.ವಿ.ಇಂದಿರಾ ಗೋವಿಂದಯ್ಯ(46) ಸಾವನ್ನಪ್ಪಿದ್ದು, ಕರೀಕ್ಯಾತನಹಳ್ಳಿ ಶಾಲಾ ಶಿಕ್ಷಕರಾದ ಫರಿದಾ, ಸೂರ್ ಆಯಿಸಾ, ಕಂಬದಹಳ್ಳಿಯ ಪ್ರೇಮ ಹಾಗೂ ಬಸವರಾಜು ಗಾಯಗೊಂಡಿದ್ದಾರೆ.
ಎಂದಿನಂತೆ ಸಂಜೆ ಶಾಲೆ ಮುಗಿಸಿ ಮನೆಗೆ ವಾಪಸ್ ಬರಲು ನಾಗಮಂಗಲ ಕಡೆಗೆ ಆಟೋ ಹತ್ತಿದ್ದಾರೆ. ಧರ್ಮಸ್ಥಳ ಗೇಟ್ ಬಳಿಯಲ್ಲಿ ನಾಯಿಯೊಂದು ಅಡ್ಡಬಂದ ಕಾರಣ ತಪ್ಪಿಸಲು ಹೋಗಿ ಆಟೋ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ತಕ್ಷಣವೇ ಆಂಬುಲೆನ್ಸ್ ಮೂಲಕ ಪಟ್ಟಣದ ಜನರಲ್ ಆಸ್ಪತ್ರೆಗೆ ಕರೆತರಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ವೈದರು ಶಿಫಾರಸ್ಸು ಮಾಡಿದ್ದಾರೆ. ಮಾರ್ಗಮಧ್ಯೆ ಇಂದಿರಾ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗಾಯಾಳುಗಳು ಪಟ್ಟಣದ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಟೋ ಚಾಲಕ ಪರಾರಿಯಾಗಿದ್ದಾನೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.