ಮೈಸೂರು: 25 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಸಚಿವ ಪುಟ್ಟರಾಜು
ಮೈಸೂರು,ಜು.17: ಮೈಸೂರು ತಾಲೂಕು ಇಲವಾಲ ಹೋಬಳಿಯ ಬತ್ತಿ ಹೋಗಿರುವ ಕೆರೆಗಳಿಗೆ ನೀರು ತುಂಬಿಸುವ ಆನಂದೂರು ಕೊಪ್ಪಲು ಏತ ನೀರಾವರಿ ಯೋಜನೆಗೆ ಸೋಮವಾರ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಚಾಲನೆ ನೀಡಿದರು.
ಅವರು ಆನಂದೂರು ಕೊಪ್ಪಲಿನಲ್ಲಿ ಚಾಲನೆ ನೀಡಿದ ನಂತರ ಮಾತನಾಡಿ, ಈ ಯೋಜನೆಯಡಿ 120 ದಿನಗಳಲ್ಲಿ ಮೈಸೂರು ತಾಲೂಕಿಗೆ ಸೇರಿದ 16 ಕೆರೆ ಹಾಗೂ ಹುಣಸೂರು ತಾಲೂಕಿನ 9 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು. ಈ ಯೋಜನೆಗೆ ನೀರು ಏತ್ತಲು ಅಳವಡಿಸಿರುವ ವಿದ್ಯುತ್ ಸಾಮರ್ಥ್ಯ ಸಾಕಾಗುತ್ತಿಲ್ಲ. ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಟ್ರಾನ್ಸಪಾರ್ಮರ್ ಬೇಕಿದ್ದು, ನೀರವಾರಿ ಹಾಗೂ ವಿದ್ಯುತ್ ಇಲಾಖೆ ಅಧಿಕಾರಿಗಳು ಚರ್ಚಿಸಿ ಬೇಕಿರುವ ವಿದ್ಯುತ್ ಉಪಕರಣವನ್ನು ಶೀಘ್ರವಾಗಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಇಲವಾಲ ಹೋಬಳಿಯಲ್ಲಿ ಹಲವಾರು ಕೆರೆ ಕಟ್ಟೆಗಳಿರುತ್ತವೆ. ಸದರಿ ಪ್ರದೇಶವು ಬರಪೀಡಿತ ಪ್ರದೇಶವಾಗಿದ್ದು, ಕೆರೆ ಕಟ್ಟೆಗಳು ಬತ್ತಿ ಹೋಗಿರುತ್ತವೆ. ಕೆರೆಗೆ ನೀರು ತುಂಬಿಸುವುದರಿಂದ ಕುಡಿಯುವ ನೀರು ದಿನಬಳಕೆ ಹಾಗೂ ಜಾನುವಾರುಗಳಿಗೆ ತುಂಬ ಅನುಕೂಲವಾಗಲಿದೆ ಎಂದರು.