ಚಾಮರಾಜನಗರ: ನೀರಿನ ರಭಸಕ್ಕೆ ಕೊಚ್ಚಿ ಹೋದ ಬ್ರಿಟೀಷರ ಕಾಲದ ವೆಸ್ಲೀ ಸೇತುವೆ
ಚಾಮರಾಜನಗರ,ಜು.16: ಕಾವೇರಿ ಕಣಿವೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿದ್ದ ವೆಸ್ಲೀ ಸೇತುವೆ ನೀರುಪಾಲಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಬಳಿಯ ಭರಚುಕ್ಕಿ ಸಮೀಪ ನಡೆದಿದೆ.
ಸತ್ತೇಗಾಲ ಹ್ಯಾಂಡ್ ಪೋಸ್ಟ್ ಸಮೀಪ ಇರುವ ಭರಚುಕ್ಕಿಗೆ ತೆರಳುವ ಮಾರ್ಗ ಮಧ್ಯೆ ಇರುವ ಸುಮಾರು ಎರಡು ಶತಮಾನದ ಕಲ್ಲುಕಂಬದ ವೆಸ್ಲೀ ಸೇತುವೆ ಇಂದು ಸಂಜೆ ಕಾವೇರಿ ನದಿ ಪಾತ್ರದಲ್ಲಿ ಹೊರ ಹರಿಯುವ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ ಎನ್ನಲಾಗಿದೆ.
ಪ್ರತಿನಿತ್ಯ ಈ ವೆಸ್ಲೀ ಸೇತುವೆ ಮೇಲೆ ನೂರಾರು ಮಂದಿ ಪ್ರವಾಸಿಗರು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಆದರೆ ನಿನ್ನೆಯಿಂದ ಈ ವೆಸ್ಲೀ ಸೇತುವೆ ಬಳಿ ನಿರಂತರವಾಗಿ ಕಾವೇರಿ ನೀರು ಹರಿಯುತ್ತಿರುವುದರಿಂದ ಪ್ರವಾಸಿಗರು ದುಸ್ಥಿತಿಯಲ್ಲಿದ್ದ ವೆಸ್ಲೀ ಸೇತುವೆ ಬಳಿ ಯಾರೂ ತೆರಳಿರಲಿಲ್ಲ. ಸೋಮವಾರ ಸಂಜೆ ಕಾವೇರಿ ಮತ್ತು ಕಬಿನಿ ನದಿಯಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದಿದ್ದರಿಂದ ಶಿಥಿಲಗೊಂಡಿದ್ದ ವೆಸ್ಲೀ ಸೇತುವೆ ನೀರು ಪಾಲಾಗಿದೆ.