ಹನೂರು: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಲೆಕ್ಕ ಪರಿಶೋದನಾ ಸಭೆ
ಹನೂರು,ಜು.19: ಸಾಮಾಜಿಕ ಪರಿಶೋದನೆ ಗ್ರಾಮ ಸಭೆಗಳ ಅನುಪಾಲನಾ ವರದಿಗಳನ್ನು ಮಂಡಿಸಬೇಕಾಗಿರುವುದು ಪಂಚಾಯತ್ ಆಡಳಿತ ಮಂಡಳಿ ಕರ್ತವ್ಯವೇ ಹೊರತು ಸಾಮಾಜಿಕ ಲೆಕ್ಕ ಪರಿಶೋದನೆಯ ಅಧಿಕಾರಿಗಳದ್ದಲ್ಲ ಎಂದು ತಾಲೂಕು ಸಂಯೋಜಕ ಮನೋಹರ್ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ಪಿ.ಜಿ ಪಾಳ್ಯ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಲೆಕ್ಕ ಪರಿಶೋದನೆ ಸಭೆಯಲ್ಲಿ ಗ್ರಾಮಸ್ಥರು ಹಿಂದಿನ ಸಭೆಗಳ ಆಕ್ಷೇಪಣೆ ಮತ್ತು ವಸೂಲಾತಿಯ ದಾಖಲಾತಿಯ ಅನುಪಾಲನಾ ವರದಿಗಳನ್ನು ಸಲ್ಲಿಸುವಂತೆ ಪಟ್ಟು ಹಿಡಿದರು. ಹಿಂದೆ ನಡೆದ ಗ್ರಾಮ ಸಭೆಗಳ ಅನುಪಾಲನಾ ವರದಿಗಳನ್ನು ನೀಡುವಂತೆ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗೆ ಮನವಿ ನೀಡಿದರೂ ಸಹ ಅಸ್ಪಷ್ಟತೆಯಿಂದ ಮಾಹಿತಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ತಾಲೂಕು ಸಂಯೋಜಕ ಮನೋಹರ್, ಸಾಮಾಜಿಕ ಅನುಪಾಲನೆ ವರದಿಗಳನ್ನು ಮಂಡಿಸಬೇಕಾಗಿರುವುದು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಕರ್ತವ್ಯವೇ ಹೊರತು ಸಾಮಾಜಿಕ ಪರಿಶೋಧಕ ಅಧಿಕಾರಿಗಳದ್ದಲ್ಲ. ಹಿಂದೆ ನಡೆದ ಯಾವುದೇ ಪಂಚಾಯತ್ ಗ್ರಾಮ ಸಭೆಯಲ್ಲೂ ಕೂಡ ಪಂಚಾಯತ್ ಅಧಿಕಾರಿಗಳು ಅನುಪಾಲನಾ ವರದಿಯನ್ನು ಸಲ್ಲಿಸಿಲ್ಲ ಮತ್ತು ಸರ್ಕಾರಕ್ಕೂ ಕೂಡ ಸಲ್ಲಿಸಿಲ್ಲ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಮತರಾಣಿ, ಉಪಾದ್ಯಕ್ಷ ನಾಗರಾಜು, ಸದಸ್ಯರು, ಕಚೇರಿ ಸಿಬ್ಬಂದಿ ಸಿದ್ದೇಶ್ ಮತ್ತು ಇನ್ನಿತರರು ಹಾಜರಿದ್ದರು.