ಶಿವಮೊಗ್ಗ: 11 ಮೇಕೆಗಳ ಸಾವು; ವಿಷಮಿಶ್ರಿತ ಸೊಪ್ಪು ಸೇವನೆ ಶಂಕೆ
ಶಿವಮೊಗ್ಗ, ಜು.22: ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ಕೋಟಿಪುರ ಗ್ರಾಮದ ಮನೆಯೊಂದರ ಕೊಟ್ಟಿಗೆಯಲ್ಲಿ 11 ಆಡುಗಳು ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದ್ದು, ರವಿವಾರ ಘಟನೆ ಬೆಳಕಿಗೆ ಬಂದಿದೆ. ವಿಷಪೂರಿತ ಸೊಪ್ಪುಸೇವನೆಯಿಂದ ಆಡುಗಳು ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಜೀವಲಿಬಾಯಿ ಎಂಬವರಿಗೆ ಈ ಆಡುಗಳು ಸೇರಿದ್ದಾಗಿವೆ. ಇದರಿಂದ ಅವರಿಗೆ ಸಾವಿರಾರು ರೂ. ನಷ್ಟವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಪರಿಶೀಲಿಸಿದರು. ಮೃತ ಆಡುಗಳ ಮರಣೋತ್ತರ ಪರೀಕ್ಷೆ ನಡೆಸಿ, ಅವು ತಿಂದಿದ್ದ ಮೇವು ಹಾಗೂ ಕರುಳಿನ ಭಾಗವನ್ನು ಸಂಗ್ರಹಿಸಿ ತಪಾಸಣೆಗಾಗಿ ಶಿವಮೊಗ್ಗದ ಪಶು ವೈದ್ಯ ವಿಶ್ವವಿದ್ಯಾನಿಲಯಕ್ಕೆ ರವಾನಿಸಿದ್ದಾರೆ.
ಕಾರಣ ಅಸ್ಪಷ್ಟ: ಶನಿವಾರ ಎಂದಿನಂತೆ ಜೀವಲಿಬಾಯಿ ಸುಮಾರು 21 ಆಡುಗಳನ್ನು ಕಾಡಿನಲ್ಲಿ ಮೇಯಿಸಿಕೊಂಡು ಅವುಗಳನ್ನು ಸಂಜೆ ಮನೆಗೆ ಕರೆತಂದು, ದೊಡ್ಡಿಯಲ್ಲಿ ಕೂಡಿ ಹಾಕಿದ್ದರು. ಆದರೆ ತಡರಾತ್ರಿಯ ವೇಳೆ ಇದರಲ್ಲಿ 11 ಆಡುಗಳು ಮೃತಪಟ್ಟಿವೆ. ಕೆಲ ಆಡುಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಇವುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ.