ಮೈಸೂರು: ಶಾಸಕ ರಾಮದಾಸ್ರನ್ನು ತರಾಟೆಗೆ ತೆಗೆದ ಮಹಿಳೆ; ಸಮಸ್ಯೆ ಪರಿಹಾರಕ್ಕೆ ಒತ್ತಾಯ
ಮೈಸೂರು,ಜು.25: ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಬಂದ ಶಾಸಕ ಎಸ್.ಎ ರಾಮದಾಸ್ ಗೆ ಸ್ಥಳೀಯ ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕೆ.ಆರ್ ಕ್ಷೇತ್ರದ ವಾರ್ಡ್ ನಂ.1ರಲ್ಲಿ ಶಾಸಕ ರಾಮದಾಸ್ ಪಾಲಿಕೆ ಸದಸ್ಯರ ಜತೆ ಪಾದಯಾತ್ರೆ ಮಾಡುತ್ತಾ ಸಮಸ್ಯೆ ಆಲಿಸುತ್ತಿದ್ದರು. ಈ ವೇಳೆ ಶಾಸಕ ರಾಮದಾಸ್ ಮತ್ತು ಪಾಲಿಕೆ ಸದಸ್ಯರನ್ನು ಸ್ಥಳೀಯ ಮಹಿಳೆಯರು ತರಾಟೆ ತೆಗೆದುಕೊಂಡು ವಾರ್ಡ್ ನಲ್ಲಿರುವ ಸಮಸ್ಯೆಗಳನ್ನ ಕೂಡಲೆ ಬಗೆಹರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ರಾಮದಾಸ್ ಅವರು ಜತೆ ಮಾತಿನ ಚಕಮಕಿಗಿಳಿದ ಸ್ಥಳೀಯರು, ಇಲ್ಲಿನ ಕಾರ್ಪೋರೇಟರ್ ಬಿ.ವಿ ಮಂಜುನಾಥ್ ಯಾವುದೇ ಕೆಲಸ ಮಾಡಿಲ್ಲ. ಒಳ ಚರಂಡಿ ಇಲ್ಲದ ಕಾರಣ ಮಳೆ ನೀರು ಮನೆ ಒಳಗೆ ನುಗ್ಗುತ್ತದೆ. ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಶಾಸಕರ ಮುಂದೆಯೇ ತರಾಟೆಗೆ ತೆಗೆದುಕೊಂಡರು.
ಜನಸಾಮಾನ್ಯರ ಸಮಸ್ಯೆ ಆಲಿಸಿ ಬಳಿಕ ಮಾತನಾಡಿದ ಶಾಸಕ ರಾಮದಾಸ್, ಅಗ್ರಹಾರ ಮಾರುಕಟ್ಟೆ ಕಾಮಗಾರಿ ಶೀಘ್ರವಾಗಿ ಕೈಗೆತ್ತಿ ಕೊಳ್ಳಲಾಗುವುದು. ದಿವಾನ್ಸ್ ರಸ್ತೆಯಲ್ಲಿ ಪ್ರತಿ ಗುರುವಾರ ಟ್ರಾಫಿಕ್ ಕಿರಿ ಕಿರಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಒಬ್ಬ ಟ್ರಾಫಿಕ್ ಪೊಲೀಸ್ ನೇಮಿಸಲಾಗುವುದು. ಲ್ಯಾನ್ಸ್ ಡೌನ್ ಬಿಲ್ಡಿಂಗ್ ಹಾಗೂ ದೇವರಾಜ ಮಾರುಕಟ್ಟೆ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.