ಕಳಸ: ಶಾಲಾ ಮಕ್ಕಳಿಗೆ 'ಕೆಸರಿನಲ್ಲಿ ಒಂದು ದಿನ' ಕಾರ್ಯಕ್ರಮ
ಕಳಸ, ಜು.28: ಇಲ್ಲಿನ ರೋಟರೀ ಕ್ಲಬ್, ಇನ್ನರ್ ವೀಲ್ ಹಾಗೂ ಎಡೂರು ಗ್ರಾಮಸ್ಥರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ಕೆಸರಿನಲ್ಲಿ ಒಂದು ದಿನ ಹಾಗೂ ಕೃಷಿ ಕ್ಷೇತ್ರ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಎಡೂರಿನ ಕಿರಣ್ ಶೆಟ್ಟಿಯವರ ತೋಟ ಹಾಗೂ ಗದ್ದೆಯಲ್ಲಿ ಶನಿವಾರ ಹಿರೇಬೈಲಿನ ಸರಕಾರಿ ಹಾಗೂ ಖಾಸಗಿ ಶಾಲೆಯ ಮಕ್ಕಳಿಗೆ ಈ ವಿನೂತನ ಕಾರ್ಯಕ್ರಮವನ್ನು ನಡೆಸಲಾಯಿತು. ಶಾಲಾ ಮಕ್ಕಳಿಗೆ ಜೇನು ಕೃಷಿಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ನಂತರ ತೋಟದಲ್ಲಿ ಸಾವಯವ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಬೆಳೆಸಿದ ತೋಟಗಳ ಪರಿಚಯ ಹಾಗೂ ಬೆಳೆದ ಬೆಳೆಯಲ್ಲಿ ಆಗುವ ವ್ಯತ್ಯಾಸಗಳ ಬಗ್ಗೆ ತೋಟದ ಮಾಲಿಕರಾದ ಕಿರಣ್ ಶೆಟ್ಟಿ ವಿವರಣೆ ನೀಡಿದರು. ಅತ್ಯಲ್ಪ ತೋಟದಿಂದ ಯಾವ ರೀತಿ ಹೆಚ್ಚುವರಿ ಇಳುವರಿಯನ್ನು ಪಡೆಯಬಹುದು ಹಾಗೂ ತಮ್ಮ ತೋಟದಲ್ಲಿ ಕೃಷಿಯ ಹೊಸ ಹೊಸ ಆವಿಸ್ಕಾರಗಳನ್ನು ಮಕ್ಕಳಿಗೆ ಮನಮುಟ್ಟುವಂತೆ ವಿವರಣೆ ನೀಡಿದರು.
ನಂತರ ಮಕ್ಕಳಿಗೆ ಹದ ಮಾಡಿದ ಗದ್ದೆಯಲ್ಲಿ ಹಗ್ಗಜಗ್ಗಾಟ, ಕಬಡ್ಡಿ, ಓಟ ವಿವಿದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಮಕ್ಕಳು ಒಂದು ದಿನ ಪೂರ್ತಿ ಕೆಸರಿನಲ್ಲಿ ತಮ್ಮನ್ನು ತಾವು ಮೈಮರೆತು ಆಟ ಆಡಿ ಕುಣಿದು ಕುಪ್ಪಳಿಸಿದರು. ನೂರಾರು ಗ್ರಾಮಸ್ಥರು ಆಗಮಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿ, ಮಕ್ಕಳೊಂದಿಗೆ ಬೆರೆತರು.
ಈ ಸಂದರ್ಭ ರೋಟರಿ ಅಧ್ಯಕ್ಷ ಕಿರಣ್ ಶೆಟ್ಟಿ, ಕಾರ್ಯದರ್ಶಿ ಕುಮಾರಸ್ವಾಮಿ, ಇನ್ನರ್ವೀಲ್ ಅಧ್ಯಕ್ಷೆ ಮಾಲಾ, ಶಿವರಾಮ ರಾಗೀಹಳ್ಳಿ, ಸುಗಮ, ಕುಮಾರ ಸ್ವಾಮಿ, ಸುಬ್ರಮಣ್ಯ, ವಿಜಯಕುಮಾರ್, ಆಶಿಕಾ, ಸವಿತಾ ಮತ್ತಿತರರು ಉಪಸ್ಥಿತರಿದ್ದರು.