ಶಿವಮೊಗ್ಗ: ಕುಡಿದು ಗಲಾಟೆ ನಡೆಸಿದ ತಂದೆಯ ಕೊಲೆಗೈದ ಮಗ
ಶಿವಮೊಗ್ಗ, ಜು. 29: ಮದ್ಯ ಸೇವಿಸಿ ಮನೆಯಲ್ಲಿ ಗಲಾಟೆ ನಡೆಸುತ್ತಿದ್ದ ತಂದೆಯನ್ನು ಪುತ್ರನೋರ್ವ ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಹೊನ್ನೆಸರ ಗ್ರಾಮದಲ್ಲಿ ನಡೆದಿದೆ.
ಕೂಲಿ ಕೆಲಸ ಮಾಡುತ್ತಿದ್ದ ಸುರೇಶ್ (48) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರ ಮಗ ಚರಣ (22) ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಸುರೇಶ್ರವರು ಪ್ರತಿದಿನ ಮದ್ಯ ಸೇವಿಸಿ ಮನೆಗೆ ಆಗಮಿಸಿ ಕುಟುಂಬದ ಸದಸ್ಯರೊಂದಿಗೆ ಗಲಾಟೆ ಮಾಡುತ್ತಿದ್ದರು. ಜ.27 ರಂದು ರಾತ್ರಿ ಕೂಡ ಪತ್ನಿಯೊಂದಿಗೆ ಜಗಳವಾಡಿದ್ದಾರೆ. ಈ ವೇಳೆ ಪುತ್ರನಿಗೂ ನಿಂದಿಸಿದ್ದಾರೆ. ಈ ವರ್ತನೆಯಿಂದ ಆಕ್ರೋಶಗೊಂಡ ಆರೋಪಿಯು, ತಂದೆಯನ್ನು ಕೆಳಕ್ಕೆ ನೂಕಿ ಬೀಳಿಸಿದ್ದಾನೆ. ತದನಂತರ ಕೋಲಿನಿಂದ ಮನಸೋಇಚ್ಚೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಸುರೇಶ್ರವರು ಅಸುನೀಗಿದ್ದಾರೆ. ಈ ಸಂಬಂಧ ಮೃತ ಸುರೇಶ್ರವರ ಸಹೋದರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.