ದಲಿತ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳಿರಬಾರದು: ಶಾಸಕ ಎಂ.ಪಿ.ಕುಮಾರಸ್ವಾಮಿ
ಛಲವಾದಿ ಮಹಾಸಭಾದ 3ನೇ ವಾರ್ಷಿಕೋತ್ಸವ
ಮೂಡಿಗೆರೆ,ಜು.29: ಯುವ ಜನಾಂಗ ಸಂತೃಪ್ತಿಗೊಂಡರೆ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣದು. ದಲಿತ ವರ್ಗದಲ್ಲಿ ಅನೇಕ ಪದವೀಧರ ಯುವಕ, ಯುವತಿಯರಿದ್ದಾರೆ. ಅವರೆಲ್ಲರಿಗೂ ವೇದಿಕೆ ಕಲ್ಪಿಸಿಕೊಡುವ ಜವಾಬ್ದಾರಿ ತನ್ನ ಮೇಲಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಜೇಸಿ ಭವನದಲ್ಲಿ ಛಲವಾದಿ ಮಹಾಸಭಾ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಲಿತ ವರ್ಗದವರಿಂದಲೇ ನನ್ನ ವಿರುದ್ಧ ಅಪಪ್ರಚಾರ ಕೇಳಿಬಂತು. ದಲಿತರಲ್ಲಿಯೇ ಒಡಕು ಉಂಟಾಗುತ್ತದೆ ಎಂಬ ಕಾರಣಕ್ಕೆ ಅದಕ್ಕೆ ತಾನು ಉತ್ತರ ಕೊಡಲಿಲ್ಲ. ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪ ಸಾಮಾನ್ಯ. ಹಾಗಂದ ಮಾತ್ರಕ್ಕೆ ನಮ್ಮಲ್ಲಿಯೇ ಭಿನ್ನಾಭಿಪ್ರಾಯಗಳು ಉಂಟಾಗಬಾರದು. ಎಲ್ಲರೂ ಒಗ್ಗೂಡಿಕೊಂಡು ಅಭಿವೃದ್ಧಿಗೆ ಕೈ ಜೋಡಿಸೋಣ. ತಾನು ಪ್ರತಿ ಗ್ರಾ.ಪಂ. ವ್ಯಾಪ್ತಿಯ ದಲಿತ ಯುವಕರನ್ನು ಬೆಳೆಸುವ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ವಿವಿಧ ಹುದ್ದೆಗಳಿಗೆ ನಡೆಯುವ ನೇಮಕಾತಿಯಲ್ಲಿ ಮೀಸಲಾತಿ ಪಾಲಿಸುತ್ತಿಲ್ಲ. ಈಗ ನಡೆದ ನೇಮಕಾತಿಯಂತೆ ಶೇ.17ರಷ್ಟನ್ನು ಮಾತ್ರ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೇಮಿಸಲಾಗುತ್ತಿದೆ. ರಾಜ್ಯದಲ್ಲಿ ದಲಿತ ತಾರತಮ್ಮ ನೀತಿ ಅನುಸರಿಸಲಾಗುತ್ತಿದೆ. ಈ ಬಗ್ಗೆ ತಾವು ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಜಾತಿ ವ್ಯವಸ್ಥೆ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್ ಅವರು ಬಂಡೆದ್ದಿದ್ದರು. ಜಾತಿ ಎಂಬುವುದೇ ಒಂದು ಅನಿಷ್ಟ ಪದ್ಧತಿ. ಅದನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂದಿದ್ದರು. ಇದರ ಬಗ್ಗೆ ಚರ್ಚೆಯಾಗಬೇಕು. ಜಾತಿ ವ್ಯವಸ್ಥೆ ಅಷ್ಟು ಸುಲಭವಾಗಿ ಹೋಗಲಾರದು. ಅಂಬೇಡ್ಕರ್ ಅವರ ಆಶಯದಂತೆ ನಡೆಯಬೇಕಾಗಿರುವುದು ಛಲವಾದಿಗಳ ಆಶಯವಾಗಿದೆ. ದಲಿತ ಸಮುದಾಯಕ್ಕೆ ಎಲ್ಲಾ ವಿಭಾಗದಿಂದಲೂ ಮೋಸ ಮಾಡಲಾಗುತ್ತಿದೆ. ದಲಿತ ವರ್ಗ ಶೇ.75ರಷ್ಟು ವ್ಯವಸಾಯ ಮತ್ತು ಕೂಲಿಯಿಂದ ಬದುಕು ಸಾಗಿಸುತ್ತಿದೆ. ಸರಕಾರದಿಂದ ಸಿಗುವ ಸವಲತ್ತುಗಳನ್ನು ಎಂದೂ ಕೇಳಿ ಪಡೆದಿಲ್ಲ. ಇದು ದಲಿತ ಸಮುದಾಯಕ್ಕೆ ದೊಡ್ಡ ಹಿನ್ನಡೆಯಾಗಿದೆ. ದುಡಿಮೆ ಮಾಡಲು ಅನೇಕ ರೀತಿಯ ಒಳ್ಳೆಯ ದಾರಿಗಳಿವೆ. ಆ ದಾರಿಯಲ್ಲಿ ಸಾಗಿ ಪ್ರತಿಯೊಬ್ಬರೂ ಪ್ರಗತಿ ಹೊಂದಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಪಟ್ಟಣದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ತಾಲೂಕು ಕಚೇರಿ ಪಕ್ಕದ ತಹಶೀಲ್ದಾರ್ ನಿವಾಸದ ಎದುರಿನಲ್ಲಿ ಸ್ಥಾಪನೆಗೆ ಜಾಗ ಸೂಕ್ತವಾಗಿದೆ. ಆ ಜಾಗವನ್ನೇ ಅಂತಿಮಗೊಳಿಸಬೇಕೆಂದು ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಲಹೆ ನೀಡಿದರು.
ಮೈಸೂರಿನ ಉಪನ್ಯಾಸಕ ಮತ್ತು ಅಂಬೇಡ್ಕರ್ವಾದಿ ಡಾ.ಎಂ.ಟಿ.ಕೃಷ್ಣಮೂರ್ತಿ ಮುಖ್ಯ ಭಾಷಣ ಮಾಡಿದರು. ಬಕ್ಕಿ ಮಂಜುನಾಥ್ ಅವರ ತಂಡದಿಂದ ಡಾ.ಬಿ.ಆರ್.ಅಂಬೇಡ್ಕರ್ ಕುರಿತ ಗೀತಗಾಯನ ನೆರೆದಿದ್ದವರನ್ನು ರಂಜಿಸಿತು. ಈ ವೇಳೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಉಪನ್ಯಾಸಕ ಸುಂದರೇಶ್, ಮಹಾಸಭಾ ಅಧ್ಯಕ್ಷ ಯು.ಆರ್.ರುದ್ರಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಸಭಾದ ಅಧ್ಯಕ್ಷ ಯು.ಆರ್.ರುದ್ರಯ್ಯ ವಹಿಸಿದ್ದರು.
ಛಲವಾದಿ ಮಹಾಸಭಾದ ರಾಜ್ಯ ಸಮಿತಿ ಮುಖಂಡ ಬೆಂಗಳೂರಿನ ಮಂಜುನಾಥ್, ಡಾ.ಪ್ರೇಮ್ಕುಮಾರ್, ಚಿಕ್ಕಮಗಳೂರು ಮೆಸ್ಕಾಂ ಎಇಇ ಡಿ.ಇ.ಅಣ್ಣಪ್ಪ, ತಾ.ಪಂ. ಸದಸ್ಯರಾದ ದೇವರಾಜು, ದೀಪಾ ನಾಗೇಶ್, ಮಹಾಪೋಷಕರಾದ ತಿಮ್ಮಯ್ಯ, ಎಚ್.ಕೆ.ಕಾಳಯ್ಯ, ಮುಖಂಡರಾದ ವೆಂಕಟಯ್ಯ, ಎಚ್.ಎಂ.ಪುಟ್ಟಯ್ಯ, ಎಂ.ಎಸ್.ಅಶೋಕ್, ಕೆ.ವಿ.ಅರುಣ್ ಕುಮಾರ್, ಹೆಸಗಲ್ ಗಿರೀಶ್, ಎಂ.ಎಸ್.ಕೃಷ್ಣ, ಕೋಮರಾಜ್ ಚಕ್ರಮಣಿ, ದೇವರಾಜು ಹೆಸಗಲ್, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.