ಪೇಜಾವರ ಶ್ರೀ ಮೇಲಿನ ಆರೋಪ ನಿಜವಾದರೆ ಶಿಕ್ಷೆಯಾಗಲಿ: ಎನ್.ಆರ್.ವಿಜಯೀಂದ್ರ ಶರ್ಮಾ
ಪೇಜಾವರ ಶ್ರೀ
ಬೆಳಗಾವಿ, ಆ.8: ಉಡುಪಿಯ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ವಿರುದ್ಧ ಕೇಳಿ ಬಂದಿರುವ ಆರೋಪಗಳು ಸಾಬೀತಾದರೆ ಶ್ರೀಗಳ ಬಂಧನಕ್ಕೆ ನಮ್ಮ ಅಭ್ಯಂತರ ಇಲ್ಲವೆಂದು ಬೆಳಗಾವಿಯ ವಿದ್ಯಾವಿಹಾರ ವಿದ್ಯಾಲಯದ ಕುಲಪತಿ ಎನ್.ಆರ್. ವಿಜಯೀಂದ್ರ ಶರ್ಮಾ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯವಾದಿ ಎ.ಕೆ. ಸುಬ್ಬಯ್ಯ ಪೇಜಾವರ ಶ್ರೀಗಳಿಗೆ ಮದುವೆ ಆಗಿದೆ, ಮಕ್ಕಳಿದ್ದಾರೆಂದು ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳಲ್ಲಿ ಯಾವುದೇ ಹುರಳಿಲ್ಲ. ಒಂದು ವೇಳೆ ಈ ಆರೋಪಗಳು ನಿಜವಾದರೆ ಶ್ರೀಗಳಿಗೆ ಶಿಕ್ಷೆ ಆಗಲಿ. ಆರೋಪ ಸುಳ್ಳಾದರೆ ನ್ಯಾಯವಾದಿ ಎ.ಕೆ. ಸುಬ್ಬಯ್ಯ ವಿರುದ್ಧ ಕಠಿಣ ಕ್ರಮವಾಗಬೇಕು ಎಂದು ಆಗ್ರಹಿಸಿದರು.
ಬ್ರಾಹ್ಮಣ ಸಮಾಜದ ಮುಖಂಡ ಅನಿಲ್ ಪೋತದಾರ ಮಾತನಾಡಿ, ಬ್ರಾಹ್ಮಣ ಸಮಾಜ ಹಾಗೂ ನಮ್ಮ ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ನಾವು ಸರಕಾರದ ಸವಲತ್ತಿಗಾಗಿ ಬೀದಿಗಿಳಿದು ಎಂದೂ ಪ್ರತಿಭಟಿಸಿಲ್ಲ. ಆದರೆ, ಸಮಾಜದ ಮುಖಂಡರ ಕುರಿತು ಸುಳ್ಳು ಆರೋಪ ಮಾಡಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.