ಕಳಸ: ಭಾರೀ ಮಳೆಗೆ ಮತ್ತೆ ಮುಳುಗಿದ ಹೆಬ್ಬಾಳೆ ಸೇತುವೆ
ಕಳಸ,ಆ.09: ಕಳಸ ಹೋಬಳಿಯಾದ್ಯಂತ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಕಳಸ-ಹೊರನಾಡು ಮದ್ಯೆ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಎಂಟನೇ ಬಾರಿಗೆ ಮುಳುಗಿ ಹೊಸ ದಾಖಲೆಯನ್ನು ಬರೆಯಿತು.
ರಾತ್ರಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಗುರುವಾರ ಬೆಳಗ್ಗೆಯೇ ಹೆಬ್ಬಾಳೆ ಸೇತುವೆ ಮುಳುಗಿ ಕಳಸ-ಹೊರನಾಡು ರಸ್ತೆ ಸಂಚಾರ ಕಡಿತವುಂಟಾಯಿತು. ಲಘು ವಾಹನಗಳು ಹಳುವಳ್ಳಿ ರಸ್ತೆ ಮುಖಾಂತರ ಹೊರನಾಡು ತಲುಪಿದ್ದು, ಬಸ್ಸುಗಳು ಸೇತುವೆಯಿಂದ ನೀರು ಕೆಳಗಿಳಿಯುವ ವರೆಗೆ ನದಿ ದಂಡೆಯಲ್ಲಿ ಕಾಯಬೇಕಾಯಿತು. ಈ ಸೇತುವೆಯು ಕಳೆದ ಎರಡು ತಿಂಗಳ ಅವದಿಯಲ್ಲಿ ಎಂಟನೇ ಬಾರಿ ಮುಳುಗಿದ್ದು, ಸೇತುವೆ ನಿರ್ಮಾಣವಾದ ಮೇಲೆ ಇಷ್ಟೊಂದು ಬಾರಿ ಸೇತುವೆ ಮುಳುಗಡೆಯಾಗಲಿಲ್ಲ ಎಂದು ತಿಳಿದುಬಂದಿದೆ.
ಭಾರೀ ಮಳೆಯಿಂದ ನದಿ ಪ್ರದೇಶದ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು,ಅಡಕೆ ತೋಟ, ಗದ್ದೆಗಳು ನೀರಿನಲ್ಲಿ ಮುಳುಗಿ ಹೋಗಿದ್ದವು. ಕುದುರೆಮುಖದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಗುರುವಾರ ಸಂಜೆಯವರೆಗೂ ಭದ್ರಾ ನದಿ ಹಾಗೂ ಉಪ ನದಿಗಳು ತುಂಬಿ ಹರಿಯುತ್ತಿದ್ದವು.
Next Story