ತೋಟಗಾರಿಕೆ ಇಲಾಖೆ ಅಧಿಕಾರಿ ಎಸಿಬಿ ಬಲೆಗೆ
ಶಿವಮೊಗ್ಗ, ಆ. 10: ಜಿಲ್ಲೆಯ ಭದ್ರಾವತಿಯ ತೋಟಗಾರಿಕಾ ಇಲಾಖೆ ಅಧಿಕಾರಿ ನಂಜೇಗೌಡರವರು ವ್ಯಕ್ತಿಯೋರ್ವರಿಂದ ಲಂಚ ಸ್ವೀಕರಿಸುವ ವೇಳೆ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ದ ಬಲೆಗೆ ಬಿದ್ದಿರುವ ಘಟನೆ ವರದಿಯಾಗಿದೆ.
ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ರೈತ ಭಾಗ್ಯರಾಜ್ ಎಂಬುವರಿಗೆ ಹನಿ ನೀರಾವರಿ ಯೋಜನೆಯಡಿ 24 ಸಾವಿರ ರೂ. ಸಹಾಯಧನ ಮಂಜೂರಾಗಿತ್ತು. ಇದನ್ನು ಬಿಡುಗಡೆ ಮಾಡಬೇಕಾದರೆ 3000 ರೂ. ನೀಡಬೇಕೆಂದು ನಂಜೇಗೌಡರವರು ಡಿಮ್ಯಾಂಡ್ ಮಾಡಿದ್ದರು. ಈ ಕುರಿತಂತೆ ಭಾಗ್ಯರಾಜ್ರವರು ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.
ಎಸಿಬಿ ಪೊಲೀಸರ ನಿರ್ದೇಶನದಂತೆ ಭಾಗ್ಯರಾಜ್ರವರು 2500 ರೂ.ಗಳನ್ನು ನೀಡಿದ್ದಾರೆ. ಇದನ್ನು ಸ್ವೀಕರಿಸುತ್ತಿದ್ದಂತೆ ನಂಜೇಗೌಡರನ್ನು ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Next Story