ಶಾಂತಿ, ಸಹಬಾಳ್ವೆಗೆ ಧಕ್ಕೆ ತರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ: ಕೋಸೌವೇ ಮುಖಂಡ ಕೆ.ಪಿ.ಶ್ರೀಪಾಲ್
ಶಿವಮೊಗ್ಗ, ಆ.11: ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಶಾಂತಿ-ಸಹಬಾಳ್ವೆಗೆ ಧಕ್ಕೆ ತರಲು ಕೆಲ ಮೂಲಭೂತವಾದಿಗಳು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮುಖಂಡ ಕೆ.ಪಿ.ಶ್ರೀಪಾಲ್ ಆಗ್ರಹಿಸಿದ್ದಾರೆ.
ಕಳೆದೆರೆಡು ದಿನಗಳಿಂದ ಯಾವುದೋ ಒಂದು ಖಾಸಗಿ ಸಂಸ್ಥೆ ಸಸ್ಯ ಆಹಾರದ ಬಗ್ಗೆ ಅರಿವು ಮೂಡಿಸುವ ನೆಪದಲ್ಲಿ ನಗರದಲ್ಲಿ ಮಾರುತಿ ವ್ಯಾನ್ಗೆ ಮೈಕ್ ಕಟ್ಟಿಕೊಂಡು ಮಾಂಸ ಆಹಾರ ರಾಕ್ಷಸರ ಆಹಾರ. ಸಸ್ಯಹಾರಿಗಳು ಶ್ರೇಷ್ಠರೆಂದು ಕೇರಿ ಕೇರಿ ತಿರುಗಿ ಪ್ರಚಾರ ಮಾಡುವ ಮೂಲಕ ಬಹುಸಂಖ್ಯಾತ ಜನರ ಆಹಾರ ಪದ್ದತಿಯ ವಿರುದ್ಧವಾಗಿ ಪ್ರಚಾರ ಮಾಡುತ್ತಿರುವುದು ನೈಸರ್ಗಿಕ ನ್ಯಾಯ ಮತ್ತು ಸಂವಿಧಾನದ ಆಶಾಯಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾರ್ಗೆಟ್: ಶಿವಮೊಗ್ಗ ನಗರದಲ್ಲಿ ಹಣ್ಣು ಹಂಪಲು ಮಾರುವ ಅನ್ಯ ಧರ್ಮಿಯರನ್ನು ಟಾರ್ಗೆಟ್ ಮಾಡಿಕೊಂಡು ಜಾಗ ಖಾಲಿ ಮಾಡಿಸಲಾಗುತ್ತಿದೆ. ಮೊದಲು ಗಾಂಧಿ ಬಜಾರ್ ಈಗ ನಳಂದ ಹೊಟೆಲ್ ಎದುರು ಸವಳಂಗ ರಸ್ತೆಯ ಪಕ್ಕದ ದರ್ಗಾ ಜಾಗದ ಆಸುಪಾಸಿನ ಹಣ್ಣಿನ ಅಂಗಡಿಗಳನ್ನು ಎಬ್ಬಿಸಲು ಕೆಲವು ಮೂಲಭೂತವಾದಿ ಸಂಘಟನೆಗಳು ಮುಂದಾಗಿವೆ. ಸಾರ್ವಜನಿಕರಿಂದ ಯಾವುದೆ ದೂರುಗಳು ಎಲ್ಲಿಯೂ ಈ ಹಣ್ಣು ತರಕಾರಿ ಮಾರುವವರ ವಿರುದ್ಧ ದಾಖಲಾಗದಿದ್ದರೂ ವಿನಾಕಾರಣ ಸುಳ್ಳು ಆರೋಪಗಳನ್ನು ಹೊರಿಸಿ ಬಡಪಾಯಿಗಳ ಜೀವನೋಪಾಯಕ್ಕಾಗಿ ನಡೆಸುತ್ತಿರುವ ಅಂಗಡಿಗಳನ್ನು ಇಲ್ಲದಾಗಿಸುವುದರ ಹಿಂದೆ ನಗರದಲ್ಲಿ ಅಶಾಂತಿ ಕದಡುವ ಮೂನ್ಸೂಚನೆ ಕಂಡುಬರುತ್ತಿದೆ ಎಂದು ಕೆ.ಪಿ.ಶ್ರೀಪಾಲ್ ಆಪಾದಿಸಿದ್ದಾರೆ.
ನಗರ ಶಾಂತಿ ಮತ್ತು ಸುವ್ಯವಸ್ಥೆ ಸರ್ಕಾರ ಮತ್ತು ಜಿಲ್ಲಾಡಳಿತದ ಹೊಣೆಯಾಗಿದೆ. ಅನಗತ್ಯ ವಿವಾದಗಳನ್ನು ಎತ್ತಿ ನಗರದ ಸಹಬಾಳ್ವೆ ಮತ್ತು ಶಾಂತಿಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕೂಡಲೆ ಗಮನಹರಿಸಬೇಕು. ನಗರದ ಶಾಂತಿ ಕದಡದಂತೆ ಜಾಗೃತೆ ವಹಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.