ಹುಬ್ಬಳ್ಳಿಯಲ್ಲಿ ಏಷ್ಯಾದ ಮೊದಲ ಹವಾನಿಯಂತ್ರಿಕ ಕೋರ್ಟ್ ಸಂಕೀರ್ಣ ಉದ್ಘಾಟನೆ
ಹುಬ್ಬಳ್ಳಿ, ಆ.12: ಇಲ್ಲಿನ ವಿದ್ಯಾನಗರದ ತಿಮ್ಮ ಸಾಗರದಲ್ಲಿ ನಿರ್ಮಾಣಗೊಂಡಿರುವ ಏಷ್ಯಾದಲ್ಲೇ ಮೊದಲ ವಿಶಿಷ್ಟ ಮತ್ತು ವಿಭಿನ್ನವಾದ ಹವಾನಿಯಂತ್ರಿತ ನ್ಯಾಯಾಲಯ ಸಂಕೀರ್ಣ ರವಿವಾರ ಉದ್ಘಾಟನೆಗೊಂಡಿತು.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೂತನ ನ್ಯಾಯಾಲಯ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು.
ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಮೋಹನ್ ಶಾಂತಗೌಡ ಮತ್ತು ಅಬ್ದುಲ್ ನಝೀರ್, ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಸೇರಿದಂತೆ 30 ನ್ಯಾಯಾಧೀಶರುಗಳು , ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ , ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ನ್ಯಾಯಾಲಯದ ಕಟ್ಟಡವು ಒಟ್ಟು 7 ಮಹಡಿಗಳನ್ನು ಹೊಂದಿದ್ದು, ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ.. ಮೊದಲ ಮಹಡಿಯಲ್ಲಿ ಹಾಲ್ ನಲ್ಲಿ ವಾದಿ- ಪ್ರತಿವಾದಿ ಹಾಗೂ ಸರಕಾರಿ ವಕೀಲರಿಗೆ ಪ್ರತ್ಯೇಕ ಟೇಬಲ್ ವ್ಯವಸ್ಥೆ , ಸಂಪೂರ್ಣ ನ್ಯಾಯಾಲಯದ ಸಂಕೀರ್ಣಕ್ಕೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು , ಪ್ರತಿ ಮಹಡಿಯಲ್ಲಿ 4 ನ್ಯಾಯಾಲಯ ಕಲಾಪದ ಸಭಾಂಗಣಗಳನ್ನು ಹೊಂದಿದೆ. ಅಲ್ಲದೇ ಕೈದಿಗಳಿಗೆ ಲಾಕಪ್ ಕೊಠಡಿ ಮತ್ತು ಕಕ್ಷಿದಾರರಿಗೆ ವಿಶ್ರಾಂತಿ ಕೊಠಡಿ ಸೌಲಭ್ಯ ನೂತನ ನ್ಯಾಯಾಲಯ ಕಟ್ಟಡದಲ್ಲಿ ಒದಗಿಸಲಾಗಿದೆ.
ನ್ಯಾಯಾಲಯದ ಆವರಣದಲ್ಲಿ ಒಂದು ಸಾವಿರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.