ಶಿವಮೊಗ್ಗ: ಕಾರ್ಖಾನೆಯಲ್ಲಿ ಅವಘಡ; ಕಾರ್ಮಿಕ ಮೃತ್ಯು
ಮಾಲಿಕ ಸೇರಿ ಮೂವರ ವಿರುದ್ಧ ಕೇಸ್
ಶಿವಮೊಗ್ಗ, ಆ. 15: ಕಾರ್ಖಾನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕನೋರ್ವ ಅವಘಡದಲ್ಲಿ ಮೃತಪಟ್ಟಿದ್ದು, ಈ ಸಂಬಂಧ ಕಾರ್ಖಾನೆಯ ಮಾಲಿಕ ಸೇರಿದಂತೆ ಮೂವರ ವಿರುದ್ದ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿರುವ ಘಟನೆ ನಡೆದಿದೆ.
ನಂಜುಂಡೇಗೌಡ ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ಇವರು ಮಾಚೇನಹಳ್ಳಿ ಕೈಗಾರಿಕಾ ವಲಯದಲ್ಲಿರುವ ಮಲ್ನಾಡ್ ಅಲಾಯ್ ಕ್ಯಾಸ್ಟಿಂಗ್ ಲಿಮಿಟೆಡ್ನಲ್ಲಿ ಕಳೆದ ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಆ. 13 ರಂದು ಎಂದಿನಂತೆ ಇವರು ಕಾರ್ಖಾನೆಯಲ್ಲಿ ಸಿಲಿಂಡರ್ ಲೋಡಿಂಗ್ ಕೆಲಸ ಮಾಡುತ್ತಿದ್ದರು. ಮರಳಿನ ಟ್ಯಾಂಕ್ ಲೀಕೇಜ್ ಇದೆ ಎಂಬ ಕಾರಣದಿಂದ ಮರಳು ಟ್ಯಾಂಕ್ ದುರಸ್ತಿ ಮಾಡುತ್ತಿರುವಾಗ, ಏಕಾಏಕಿ ಕ್ರೈನ್ ಚಾಲನೆಗೊಳಿಸಲಾಗಿತ್ತು. ಇದು ಅವರ ಕುತ್ತಿಗೆಗೆ ಬಡಿದು, ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ನಂಜುಂಡೇಗೌಡರ ಸಾವಿಗೆ ಕಾರ್ಖಾನೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದಿರುವುದೆ ಕಾರಣವೆಂದು ಆರೋಪಿಸಲಾಗಿದೆ. ಈ ಸಂಬಂಧ ಕಾರ್ಖಾನೆಯ ಮಾಲೀಕರಾದ ಮಧುಕರ ಜೋಯಿಸ್, ಸೇಫ್ಟಿ ಮ್ಯಾನೇಜರ್ ಕಿರಣ್, ಕಂಪೆನಿಯ ಮ್ಯಾನೇಜರ್ ಸಿ.ಎನ್.ಮಹೇಶ್ರವರ ವಿರುದ್ದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.