ಜಯಪುರ: ಭೂಕಂಪನ ಸ್ಥಳದಲ್ಲಿ ಬೆಂಗಳೂರಿನ ವಿಜ್ಞಾನಿಗಳಿಂದ ಪರಿಶೀಲನೆ
ಜಯಪುರ, ಆ.15: ಭೂಕಂಪನ ಹಾಗೂ ಭಾರಿ ಸ್ಪೋಟದ ಮೂಲಕ ಅತ್ತಿಕೊಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲ ಗ್ರಾಮಗಳ ಜನರ ನಿದ್ದೆಗೆಡಿದ್ದ ಅಬ್ಬಿಕಲ್ಲು, ನಾಯಕನಕಟ್ಟೆ, ಚಾರನಕುಡಿಗೆ ಗ್ರಾಮಗಳಿಗೆ ಬೆಂಗಳೂರಿನ ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಕೇಂದ್ರದ ವಿಜ್ಞಾನಿಗಳಾದ ಡಾ.ರಮೇಶ್, ಅಭಿನಯಾ ಹಾಗೂ ಚಿಕ್ಕಮಗಳೂರಿನ ಹಿರಿಯ ಭೂಗರ್ಭ ಶಾಸ್ತ್ರಜ್ಞ ಡಾ.ಮಹೇಶ್ ತಂಡಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭೂ ಗರ್ಭದೊಳಗಿನ ಬಂಡೆಗಳು ಹಾಗೂ ಮಣ್ಣಿನ ಪದರಗಳ ಜಾರುವಿಕೆಯಿಂದ ಈ ರೀತಿಯ ಶಬ್ದ ಕಂಪನವಾಗುತ್ತಿದ್ದು, ಇದಕ್ಕೆ ಜನತೆ ಆತಂಕ ಪಡುವ ಅವಶ್ಯಕತೆಯಿಲ್ಲ. ಈ ಭಾಗದ ಜಿ.ಪಿ.ಎಸ್. ಸಾಧನದ ಮೂಲಕ ಮಾಹಿತಿಯನ್ನು ಸಂಗ್ರಹಿಸಿದ್ದು, ಮೂರರಿಂದ ನಾಲ್ಕು ದಿನಗಳಲ್ಲಿ ನಿಖರವಾದ ಮಾಹಿತಿಯನ್ನು ನೀಡುವುದಾಗಿ ವಿಜ್ಞಾನಿಗಳ ತಂಡ ತಿಳಿಸಿತು.
ಜಯಪುರ ಪೋಲಿಸ್ ಠಾಣೆಯ ಎಎಸ್ಸೈ ಸೂರಪ್ಪ, ರವಿ ಕಂದಾಯ ಇಲಾಖೆಯ ಆರ್.ಐ. ನಾಗರಾಜ್, ಅತ್ತಿಕೊಡಿಗೆ ಗ್ರಾಮ ಪಂ. ಅಧ್ಯಕ್ಷ ವೆಂಕಟಕೃಷ್ಣ ಹೆಬ್ಬಾರ್, ಕಾಂಗ್ರೆಸ್ ಮುಖಂಡರಾದ ಡಿ.ಎಸ್.ಸತೀಶ್, ನೆಲ್ಲಿಹಡ್ಲು ನಾಗಭೂಷಣ್, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.