ಭಾರೀ ಮಳೆಗೆ ತತ್ತರಿಸಿದ ಕೊಡಗು: ಕಾರವಾರದಿಂದ ನೌಕಾಪಡೆ ಆಗಮನ
ಗಂಜಿಕೇಂದ್ರಗಳನ್ನು ತೆರೆಯಲು ಸೂಚನೆ, ಅಪಾಯದಲ್ಲಿ ಗ್ರಾಮೀಣ ಪ್ರದೇಶಗಳು
ಕೊಡಗು, ಆ.17: ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದ ಕೊಡಗು ಜಿಲ್ಲೆ ಸಂಪೂರ್ಣವಾಗಿ ತತ್ತರಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂತ್ರಸ್ತರ ರಕ್ಷಣೆಗೆ ಕಾರಾವಾರದಿಂದ ನೌಕಾಪಡೆ ಆಗಮಿಸುತ್ತಿದ್ದು, ಈಗಾಗಲೇ 70 ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಿಂದ 80 ಯೋಧರು ಆಗಮಿಸುತ್ತಿದ್ದಾರೆ. ಮೈಸೂರು, ಹಾಸನದಿಂದ ಕಂದಾಯ, ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ವೈದ್ಯಕೀಯ ತಂಡಗಳ ಆಗಮಿಸುತ್ತಿದ್ದು, ಜಿಲ್ಲೆಯಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಮೈಸೂರಿನಿಂದ ಸೀಮೆಎಣ್ಣೆ ಪೂರೈಕೆಗೆ ಸೂಚನೆ ನೀಡಲಾಗಿದೆ ಎಂದರು.
ಅಗತ್ಯವಿರುವ ಎಲ್ಲೆಡೆ ಗಂಜಿಕೇಂದ್ರಗಳನ್ನ ತೆರೆಯಲು ಸೂಚನೆ ನೀಡಲಾಗಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ಜೆಸಿಬಿಗಳ ವಶಕ್ಕೆ ಪಡೆದುಕೊಳ್ಳುವಂತೆ ಎಸ್ಪಿಗೆ ಸೂಚಿಸಲಾಗಿದೆ. ಹೆಲಿಕಾಪ್ಟರ್ ನಿಂದ ರಕ್ಷಣೆಗೆ ಹವಾಮಾನದ ಸಮಸ್ಯೆ ಎದುರಾಗಿದ್ದು, ವಾತಾವರಣ ತಿಳಿಯಾದರಷ್ಟೇ ಸಂತ್ರಸ್ಥರ ಸ್ಥಳಕ್ಕೆ ಹೋಗಲು ಸಾಧ್ಯ ಎಂದು ಸಚಿವರು ಹೇಳಿದರು.