ಚಾಮರಾಜನಗರ: ಪ್ರವಾಹ ಪೀಡಿತ ಪ್ರದೇಶಕ್ಕೆ ಸಚಿವ ಎನ್.ಮಹೇಶ್ ಭೇಟಿ
ಚಾಮರಾಜನಗರ,ಆ.17: ಕಾವೇರಿ ಮತ್ತು ಕಬಿನಿ ನದಿ ಪಾತ್ರದಲ್ಲಿ ಹರಿದು ಬರುತ್ತಿರುವ ಸುಮಾರು ಎರಡು ಲಕ್ಷ ಕ್ಯೂಸೆಕ್ಸ್ ನೀರಿನಿಂದ ಗಡಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು, ಕಾವೇರಿಪುರ, ದಾಸನಪುರ, ಹಂಪಾಪುರ ಸೇರಿದಂತೆ ಹಲವಾರು ಗ್ರಾಮಗಳು ಜಲಾವೃತವಾಗಿದ್ದು, ಶಿಕ್ಷಣ ಸಚಿವ ಹಾಗೂ ಸ್ಥಳೀಯ ಶಾಸಕರಾಗಿರುವ ಎನ್.ಮಹೇಶ್ ಅಧಿಕಾರಿಗಳೊಂದಿಗೆ ಪರಿಶೀಲಿಸಿ, ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಲವಾರು ಗ್ರಾಮಗಳು ಕಾವೇರಿ ಕಬನಿ ನದಿ ನೀರಿನಿಂದ ಜಲಾವೃತವಾಗಿದ್ದನ್ನು ಕಣ್ಣಾರೆ ಕಂಡ ಶಿಕ್ಷಣ ಸಚಿವರು, ಜನರ ನೋವಿಗೆ ಸ್ಪಂದಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಬೇಕು ಹಾಗೂ ಗಂಜಿ ಕೇಂದ್ರವನ್ನು ತೆರೆದು ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಂತೆ ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾಗಿ ಹೇಳಿ ಗ್ರಾಮಸ್ಥರಿಂದ ವಿವರವನ್ನು ಪಡೆದುಕೊಂಡರು.
ಸರ್ಕಾರಿ ಶಾಲೆ, ಅಂಗನವಾಡಿ ಸೇರಿದಂತೆ ಮನೆ, ಗುಡಿಸಲುಗಳು ನೀರಿನಿಂದ ಆವೃತವಾಗಿದ್ದು, ಜನರು ಕಂಗಲಾಗಿದ್ದಾರೆ. ತಾನು ಗದಗ್ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರಿಂದ ಅಲ್ಲಿಗೆ ಸ್ವಾತಂತ್ರ್ಯ ದಿನಾಚರಣೆ ಸಮಾರಂಭಕ್ಕೆ ಹೋಗಿದ್ದು, ರಾತ್ರಿ ಬಂದ ತಕ್ಷಣ ಇಂದು ಬೆಳಗ್ಗೆ ಅಧಿಕಾರಿಗಳೊಂದಿಗೆ ಪ್ರವಾಹ ಪೀಡಿತ ಪ್ರದೇಶ ವೀಕ್ಷಣೆ ಮಾಡಿದ್ದೇನೆ. ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಶಾಶ್ವತ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡುವುದಾಗಿ ಸಚಿವ ಎನ್ ಮಹೇಶ್ ಹೇಳಿದರು.
ಸಚಿವರೊಂದಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಕೊಳ್ಳೇಗಾಲ ಉಪ ವಿಭಾಗಾಧಿಕರಿ ಪೌಜಿಯಾ ತರುನ್ನುಂ ಸೇರಿದಂತೆ ಬಹುತೇಕ ಅಧಿಕಾರಿಗಳು ಜನಪ್ರತಿನಿಧಿಗಳು ಇದ್ದರು.