ಅತಿವೃಷ್ಟಿ ಹಾನಿ; ಮಂದಗತಿಯ ಪರಿಹಾರ : ಸರಕಾರದ ವಿರುದ್ಧ ಬಿಎಸ್ವೈ ಅಸಮಾಧಾನ
ಮಡಿಕೇರಿ, ಆ.19 :ಅತಿವೃಷ್ಟಿಯಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅಪಾರ ಹಾನಿ ಸಂಭವಿಸಿದ್ದರೂ ರಾಜ್ಯ ಸರ್ಕಾರ ಪರಿಹಾರ ಕಾರ್ಯಗಳನ್ನು ನಡೆಸುವಲ್ಲಿ ಮಂದಗತಿಯ ಧೋರಣೆಯನ್ನು ಅನುಸರಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ಮಳೆಯ ಪ್ರಮಾಣ ಇಳಿಮುಖಗೊಂಡ ಬಳಿಕ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಾರ್ಯಗಳಿಗೆ ಸರಕಾರ ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಅತಿವೃಷ್ಟಿ ಪೀಡಿತ ಸುಂಟಿಕೊಪ್ಪ ವಿಭಾಗಗಳಿಗೆ ಭೇಟಿ ನೀಡಿ ಮಡಿಕೇರಿಗೆ ಆಗಮಿಸಿದ ಯಡಿಯೂರಪ್ಪ ಅವರು, ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳಿಂದ ಮಳೆಹಾನಿಯ ಬಗ್ಗೆ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ಪುನರ್ವಸತಿ ಕೇಂದ್ರಗಳಲ್ಲಿ ಉಟ್ಟ ಬಟ್ಟೆಯಲ್ಲೆ ಮನೆ ತೊರೆದು ಬಂದ ನಿರಾಶ್ರಿತರಿಗೆ ಮಳೆ ಕಳೆದ ಕೂಡಲೆ ತಾತ್ಕಾಲಿಕ ನೆಲೆಯನ್ನು ಒದಗಿಸಬೇಕು. ತಿಂಗಳ ಬಳಿಕ ಸಂತ್ರಸ್ತರಿಗೆ ಮನೆಗಳ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದು ತಿಳಿಸಿದರು.
ಪುನರ್ವಸತಿ ಕೇಂದ್ರಗಳಿಗೆ ತೆರಳಿದ ಸ್ಥಳಗಳಲ್ಲಿ ಅಲ್ಲಿನ ಸಂತ್ರಸ್ತರು, ತಮ್ಮ ಸಂಕಷ್ಟಗಳಿಗೆ ಸರ್ಕಾರ ಧಾವಿಸಿ ರಕ್ಷಣೆಯನ್ನು ಒದಗಿಸಿಲ್ಲ ಎನ್ನುವ ಅಸಮಾಧಾನವನ್ನು ಹೊಂದಿರುವುದಾಗಿ ತಿಳಿಸಿದ ಯಡಿಯೂರಪ್ಪ, ಸಂತ್ರಸ್ತರಿಗೆ ಅತಿವೃಷ್ಟಿಯ ಪರಿಸ್ಥಿತಿ ತಿಳಿಗೊಂಡ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದೊಂದಿಗೆ ಮನೆಗಳನ್ನು ನಿರ್ಮಿಸಿಕೊಟ್ಟು ನೆಲೆ ಒದಗಿಸಬೇಕಾಗಿದೆಯೆಂದು ತಿಳಿಸಿ, ತಿಂಗಳ ಒಳಗಾಗಿ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವುದಕ್ಕೆ ಪೂರಕವಾದ ಜಾಗವನ್ನು ಗುರುತಿಸುವ ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಇದೇ ಸಂದರ್ಭ ಸೂಚನೆಯನ್ನು ನೀಡಿದರು.
ಆಹಾರ ಕಳುಹಿಸುವುದು ಬೇಡ
ಮುಂಗಾರಿನ ಆರ್ಭಟದಿಂದ ಕೊಡಗು ನಲುಗಿದ್ದು, ಇಲ್ಲಿ ಸಂತ್ರಸ್ತರಿಗೆ ನೆರವು ನೀಡಲು ದಾನಿಗಳ ಯಾವುದೇ ಕೊರತೆ ಇಲ್ಲ. ಈಗಾಗಲೆ ಅಗತ್ಯ ಮೀರಿ ಹೊರ ಜಿಲ್ಲೆಗಳಿಂದ ಆಹಾರ ಸಾಮಗ್ರಿಗಳನ್ನು ಮನ ಬಂದಂತೆ ಕಳುಹಿಸಲಾಗುತ್ತಿದೆ. ಇದನ್ನು ಸಮಪರ್ಕವಾಗಿ ವಿತರಿಸಲೂ ಸಾಧ್ಯವಿಲ್ಲವಾಗಿದ್ದು, ಬೇಡಿಕೆಗೆ ತಕ್ಕಂತೆ ಮಾತ್ರ ಆಹಾರವನ್ನು ಕಳುಹಿಸುವಂತೆ ನಾಡಿನ ಜನತೆಯಲ್ಲಿ ಮನವಿ ಮಾಡಿದ ಯಡಿಯೂರಪ್ಪ ಅವರು, ಅಳತೆ ಮೀರಿ ಕಳುಹಿಸುವ ಚಪಾತಿ, ಬ್ರೆಡ್ ಮೊದಲಾದ ಸಾಮಗ್ರಿಗಳು ಬಳಕೆಗೆ ಬಾರದೆ ಹಾಳಾಗಿ ಹೋಗುವ ಸಾಧ್ಯತೆಗಳೆ ಅಧಿಕವೆಂದು ತಿಳಿಸಿದರು.
ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಪ್ರಮುಖ ವಾಣಿಜ್ಯಕ ಕೃಷಿ ಕಾಫಿ, ಏಲಕ್ಕಿ ಸೇರಿದಂತೆ ವಿವಿಧ ಕೃಷಿ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿದ್ದು, ಈ ಬಗ್ಗೆ ವಿಸ್ತೃತ ವರದಿಯನ್ನು ತಯಾರಿಸಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಅಗತ್ಯ ಪರಿಹಾರವನ್ನು ಒದಗಿಸುವ ಕಾರ್ಯ ನಡೆಯಬೇಕೆಂದು ಯಡಿಯೂರಪ್ಪ ತಿಳಿಸಿದರು.
ಕಳ್ಳರ ಆತಂಕ
ಈಗಾಗಲೆ ಜಿಲ್ಲೆಯ ಹಲವೆಡೆಗಳಲ್ಲಿ ಭಾರೀ ಮಳೆ ಮತ್ತು ಭೂ ಕುಸಿತದಂತಹ ಘಟನೆಗಳಿಂದ ಸಹಸ್ರಾರು ಮಂದಿ ಮನೆಗಳನ್ನು ತೊರೆದು ಉಟ್ಟ ಬಟ್ಟೆಯಲ್ಲೆ ತಮ್ಮ ಮನೆಯನ್ನು ತೊರೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯ ದುರುಪಯೋಗ ಪಡೆದು ಕಳ್ಳತನಗಳು ನಡೆಯುತ್ತಿರುವ ಬಗ್ಗೆ ತನಗೆ ದೂರುಗಳು ಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ ಆದ್ಯ ಗಮನ ಹರಿಸಿ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಭಾರೀ ಪ್ರಮಾಣದಲ್ಲಿ ನಡೆದಿದ್ದರೂ ಮುಖ್ಯಮಂತ್ರಿಗಳು ಲೆಕ್ಕಕ್ಕೆ ಎಂಬಂತೆ ಬಂದು ತೆರಳಿದ್ದಾರೆದಂದು ಬೇಸರ ವ್ಯಕ್ತಪಡಿಸಿ, ಸಂತ್ರಸ್ತರ ಸಂಕಷ್ಟಗಳಿಗೆ ಸರ್ಕಾರ ಸೂಕ್ತ ಸ್ಪಂದನೆ ನೀಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ತೆರೆಯಲಾಗಿರುವ ಪುನರ್ವಸತಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಅಗತ್ಯ ಊಟದ ವ್ಯವಸ್ಥೆಯನ್ನು ಒದಗಿಸಲು ಅಡುಗೆಯವರನ್ನು ನಿಯುಕ್ತಿಗೊಳಿಸುವುದರತ್ತ ಜಿಲ್ಲಾಡಳಿತ ಗಮನ ಹರಿಸುವುದರೊಂದಿಗೆ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವುದು, ಮಹಿಳೆಯರಿಗೆ ಅಗತ್ಯ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಎಂಎಲ್ಸಿ ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ರಾಜ್ಯ ಕಾರ್ಯದರ್ಶಿ ಅಂಬುದಾಸ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.