ಮೂಡಿಗೆರೆ: ನೆರೆ ಸಂತ್ರಸ್ತರಿಗಾಗಿ ಪೀಸ್ ಅಂಡ್ ಅವೇರ್ನೆಸ್ ಟ್ರಸ್ಟ್ ನಿಂದ ಅಗತ್ಯ ವಸ್ತು ಮತ್ತು ನಿಧಿ ಸಂಗ್ರಹ
ಮೂಡಿಗೆರೆ, ಆ.20: ಕೊಡಗು ಜಿಲ್ಲೆಯಲ್ಲಿ ಮಹಾಮಳೆಯಿಂದ ನಿರಾಶ್ರಿತರಾದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನ ಸಹಾಯಕ್ಕಾಗಿ ಮತ್ತು ನಿರಾಶ್ರಿತರಿಗೆ ಆಹಾರ, ಬಟ್ಟೆ ಸಹಿತ ಅಗತ್ಯ ವಸ್ತುಗಳನ್ನು ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್ ನ ಸದಸ್ಯರು ಸಾರ್ವಜನಿಕರಿಂದ ಸಂಗ್ರಹಿಸಿ, ಕೊಡಗಿಗೆ ಸೋಮವಾರ ಕಳುಹಿಸಿಕೊಟ್ಟಿದ್ದಾರೆ.
ಈ ವೇಳೆ ಟ್ರಸ್ಟ್ ಅಧ್ಯಕ್ಷ ಅಲ್ತಾಪ್ ಬಿಳಗುಳ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾಮಳೆಗೆ ಸಿಲುಕಿ ಕೊಡಗು ಮತ್ತು ಮಂಗಳೂರು ಜಿಲ್ಲೆಗಳ ಸಹಿತ ಕೇರಳ ರಾಜ್ಯದಲ್ಲಿ ಸಾವಿರಾರು ಕುಟುಂಬಗಳು ಬೀದಿಗೆ ಬಂದಿದೆ. ಸಾಕು ಪ್ರಾಣಿ, ಪಕ್ಷಿಗಳು ಸಾವನ್ನಪ್ಪಿದೆ. ನಿರಾಶ್ರಿತರು ಮನೆ, ಮಠ ಕಳೆದುಕೊಂಡು, ಶಾಲೆ ಕಟ್ಟಡ ಮದುವೆ ಹಾಲ್ ಸೇರಿದಂತೆ ವಿವಿಧ ಕಟ್ಟಡಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅವರು ಆಹಾರ ಮತ್ತು ಬಟ್ಟೆ ಬರೆಗಳ ಸಹಿತ ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ಅವರಿಗೆ ಕೆಲವು ವಸ್ತುಗಳನ್ನಾದರೂ ಸಾರ್ವಜನಿಕರಿಂದ ಸಂಗ್ರಹಿಸಿ ತಲುಪಿಸೋಣ ಎಂಬ ನೆಲೆಯಲ್ಲಿ ಸಾರ್ವಜನಿಕರಿಂದ ಎರಡು ದಿನ ಸಂಗ್ರಹಿಸಿ, ಸೋಮವಾರ ಒಂದು ಲೋಡ್ ವಸ್ತುಗಳನ್ನು ಕಳುಹಿಸಲಾಗಿದೆ. ಸಂಗ್ರಹವಾದ ಹಣವನ್ನು ಸೋಮವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎಣಿಕೆ ಮಾಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಡಿಡಿ ಮೂಲಕ ಕಳುಹಿಸಿಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಿಎಂ ಪರಿಹಾರ ನಿಧಿಗೆ ಹಣ ಮತ್ತು ನಿರಾಶ್ರಿತರಿಗೆ ಆಹಾರ ಬಟ್ಟೆ ಮತ್ತಿತರ ಬಟ್ಟೆ ಸಂಗ್ರಹಿಸುವ ವೇಳೆ ಸಮಾಜ ಸೇವಕ ಫಿಶ್ ಮೋಣು, ಬಿ.ಎಚ್.ಮಹಮ್ಮದ್, ಟ್ರಸ್ಟ್ ಪದಾಧಿಕಾರಿಗಳಾದ ವಿಜಯ ಕುಮಾರ್, ಆಸೀಫ್ ಕೃಷ್ಣಾಪುರ, ದಾವುದ್, ಅರಫಾ ಬಿಳಗುಳ, ಅಲಿ ಮೂಡಿಗೆರೆ, ಶಾನು ಮತ್ತಿತರರಿದ್ದರು.