ಮಡಿಕೇರಿ: ಮಣ್ಣಿನಡಿ ಸಿಲುಕಿದ್ದ ವೃದ್ಧೆಯ ಮೃತದೇಹ ಪತ್ತೆ
ಮಡಿಕೇರಿ, ಆ.23: ಭಾರೀ ಮಳೆಗೆ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ನಾಪತ್ತೆಯಾಗಿದ್ದ ವೃದ್ಧೆಯೋರ್ವರ ಮೃತದೇಹವನ್ನು ಸೇನಾ ಸಿಬ್ಬಂದಿಗಳು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ 17 ರ ಬೆಳಿಗ್ಗೆ 7.30 ರ ವೇಳೆಗೆ ಹೆಬ್ಬೆಟ್ಟಗೇರಿಯ ಉಮ್ಮವ್ವ (80) ಎಂಬವರ ಮನೆ ಮೇಲೆ ಗುಡ್ಡ ಕುಸಿದು ಬಿದ್ದಿತ್ತು. ನಂತರ ಮನೆಯೊಳಗಿದ್ದವರು ಏನಾದರು ಎಂಬ ಬಗ್ಗೆ ಮಾಹಿತಿಯೇ ಇರಲಿಲ್ಲ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಆಗಸ್ಟ್ 17 ರಿಂದ ಉಮ್ಮವ್ವ ನಾಪತ್ತೆಯಾಗಿದ್ದಾರೆ ಎಂದು ಘೋಷಿತಸಲಾಗಿತ್ತು.
ಗುರುವಾರ ಬೆಳಿಗ್ಗೆ ಹೆಬ್ಬೆಟ್ಟಗೇರಿ ಕಡೆಗೆ ತೆರಳಿದ 15 ನೇ ಡೋಂಗ್ರಾ ರೆಜಿಮೆಂಟ್ನ 15 ಮಂದಿ ಯೋಧರ ತಂಡ ಸ್ಥಳೀಯರ ನೆರವಿನೊಂದಿಗೆ ಶೋಧ ಕಾರ್ಯ ಆರಂಭಿಸಿತು. ಗುಡ್ಡ ಕುಸಿದು ಮನೆ ಧ್ವಂಸಗೊಂಡ ಸ್ಥಳದಿಂದ 50 ಅಡಿ ದೂರದಲ್ಲಿ ಕೆಸರಿನ ನಡುವೆ ಸಿಲುಕಿಕೊಂಡ ಸ್ಥಿತಿಯಲ್ಲಿ ವೃದ್ಧೆ ಉಮ್ಮವ್ವ ಅವರ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.
Next Story