ಸುಂಟಿಕೊಪ್ಪ: ಪ್ರವಾಹ ಸಂತ್ರಸ್ತರ ಕೇಂದ್ರಕ್ಕೆ ಸಚಿವ ಯು.ಟಿ.ಖಾದರ್ ಭೇಟಿ
ಸುಂಟಿಕೊಪ್ಪ,ಆ.23: ಅತಿವೃಷ್ಠಿಯಿಂದ ಮನೆಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಡುವುದಲ್ಲದೆ ಭಾಗಶ; ಮನೆಹಾನಿಯಾದವರಿಗೂ ಪರಿಹಾರ ಒದಗಿಸಲಾಗುವುದು. ಸಂತ್ರಸ್ಥರ ಮಕ್ಕಳನ್ನು ಶಾಲೆಗೆ ಸೇರಿಸುವ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ನಗರಾಭಿವೃದ್ದಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದರು.
ಸಂತ ಮೇರಿ ಆಂಗ್ಲ ಮಾಧ್ಯಮ, ಸಂತಅಂತೋಣಿ ಶಾಲೆಯಲ್ಲಿ ಆಶ್ರಯ ಪಡೆದ ನಿರಾಶ್ರಿತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಅವರು, ಅತಿವೃಷ್ಠಿಯಿಂದ ಆಗಬಾರದ್ದು ಆಗಿದೆ. ಬದುಕು ಮೊದಲಿನ ಸ್ಥಿತಿಯಂತೆ ಕಟ್ಟಿಕೊಳ್ಳಲು ಸರಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ತಾತ್ಕಾಲಿಕವಾಗಿ 1 ಕುಟುಂಬಕ್ಕೆ 3800 ರೂ ಆರ್ಥಿಕ ನೆರವು ನೀಡಲಾಗುವುದು ಎಂದರು. ಈಗ ಸ್ವಲ್ಪ ಮಳೆ ಕಡಿಮೆಯಾಗಿದ್ದು, ರಸ್ತೆ ಸಂಪರ್ಕ ಕಡಿತ ಗೊಂಡ ಗ್ರಾಮೀಣ ಪ್ರದೆಶದ ರಸ್ತೆಯನ್ನು 2 ದಿನದಲ್ಲಿ ಸರಿಪಡಿಸಲಾಗುವುದು ಎಂದರು.
ಮನೆಗೆ ತೆರಳಲು ಎಲ್ಲಾ ಕಡೆಯಿಂದ ರಸ್ತೆ ಇಲ್ಲದಾಗಿದೆ, ಸರಿಪಡಿಸಿಕೊಡಿ ಎಂದು ಹಾಲೇರಿ ಗ್ರಾಮದ ಸಂತ್ರಸ್ಥರಾದ ಸಾವಿತ್ರಿ ಗಿರಿಜ ಅಂಗಾರ ಅಲವತ್ತು ಕೊಂಡರು. ಹೋಬಳಿ ವ್ಯಾಪ್ತಿಯಲ್ಲಿ ಕುಸಿದಿರುವ ರಸ್ತೆಗಳಿಗೆ ಆದಷ್ಟು ಬೇಗನೇ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು. ಇನ್ನಷ್ಟು ಗ್ರಾಮಗಳ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನಂತರ ಜಿಲ್ಲಾಧಿಕಾರಿಗಳಿಗೆ ಕೂಡಲೆ ವರದಿಯನ್ನು ನೀಡಿದರೆ ಪರಿಹಾರ ತಕ್ಷಣವೇ ಸಿಗಲಿದೆ. ಅಲ್ಲದೆ ವಸತಿಗಳ ಹಾನಿಯ ಬಗ್ಗೆ ಪುನರ್ವಸತಿ ಕೇಂದ್ರದ ಮುಖ್ಯ ಕಾರ್ಯದರ್ಶಿ ಅನ್ಬು ಕುಮಾರ್ 2-3 ದಿನಗಳಿಂದ ಇಲ್ಲಿಯೇ ಮೊಕ್ಕಾಂ ಹೂಡಿದ್ದು ಸಂಪೂರ್ಣ ವರದಿಯನ್ನು ನೀಡುತ್ತಿದ್ದಾರೆ. ಸಂತ್ರಸ್ಥರನ್ನು ಗುರುತಿಸಿ ಅವರಿಗೆ ಸರಕಾರದ ಸೌಲಭ್ಯ ಒದಗಿಸಿ ಕೊಡಲಿದ್ದಾರೆ ಎಂದು ಯು.ಟಿ.ಖಾದರ್ ಹೇಳಿದರು.
ವಿಟ್ಲದ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ರಾಜ್ಯ ವಸತಿ ನಿರ್ದೆಶಕರಾದ ಪವನ್ ಕುಮಾರ್ ಜಿಲ್ಲಾ ಎಸ್ಪಿ ಸುಮನ್ ಪಣ್ಣೇಕರ್, ತಹಶೀಲ್ದಾರ್ ಮಹೇಶ್, ಮಾಜಿ ಗ್ರಾ.ಪಂ.ಅಧ್ಯಕ್ಷ ಎಂಎ.ಉಸ್ಮಾನ್ ಮತ್ತಿತರರು ಹಾಜರಿದ್ದರು.