ಪತ್ರಿಕಾ ವರದಿಗಾರನಿಗೆ ಅಧಿಕ ಪ್ರಸಂಗಿ ಎಂದ ಅನಂತಕುಮಾರ್ ಹೆಗಡೆ
ಕೇಂದ್ರ ಸಚಿವರ ಎದುರೇ ಬಿಜೆಪಿ ಅಭ್ಯರ್ಥಿಗಳ ಕಿತ್ತಾಟ
ಮುಂಡಗೋಡ,ಆ.28: ನಗರ ಸ್ಥಳೀಯ ಸಂಸ್ಥೆಯ ಟಿಕೆಟ್ ವಂಚಿತರು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಎದುರೇ ಕಿತ್ತಾಡಿದ ಘಟನೆ ಉತ್ತರ ಕನ್ನಡದ ಮುಂಡಗೋಡ ತಾಲೂಕಿನಲ್ಲಿ ಮಂಗಳವಾರ ನಡೆದಿದೆ.
ಕೇಂದ್ರ ಸಚಿವ ಅನಂತ್ ಕುಮಾರ್ ನೇತೃತ್ವದಲ್ಲಿ ಪಟ್ಟಣದಲ್ಲಿ ಚುನಾವಣೆ ಸಂಬಂಧ ಅಭ್ಯರ್ಥಿಗಳ ಹಾಗೂ ಮುಖಂಡರ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಟಿಕೆಟ್ ವಂಚಿತ ಬಿಜೆಪಿ ಮಹಿಳಾ ಮೋರ್ಚಾ ಮುಖಂಡೆ ಸುಮನಾ ಕುಲಕರ್ಣಿ ಹಾಗೂ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಫಣಿರಾಜ್ ಕಿತ್ತಾಡಿಕೊಂಡಿದ್ದಾರೆ.
ಮುಂಡಗೋಡ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಫಣಿರಾಜ್ ಹಾಗೂ ಆತನ ಪತ್ನಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿತ್ತು. ಆದರೆ ಸಭೆಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾ ಪ್ರಶ್ನಿಸಿದ ಸುಮನಾ, ಗಂಡ ಹೆಂಡತಿಗೆ ಟಿಕೆಟ್ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸುಮನಾ ವಿರುದ್ದ ಸಿಟ್ಟಾಗಿ ಕಿಡಿಕಾರಿದ ಫಣಿರಾಜ್ ಸಚಿವರ ಮುಂದೆಯೇ ಕಿತ್ತಾಡಿಕೊಂಡರೂ ಸಚಿವರು ಮೂಖ ಪ್ರೇಕ್ಷಕರಾಗಿ ನೋಡಬೇಕಾಯಿತು.
ಈ ನಡುವೆ ಗಲಾಟೆಯನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ವಿರುದ್ಧವೂ ಹರಿಹಾಯ್ದ ಅನಂತ್ ಕುಮಾರ್ ಹೆಗಡೆ ಅಧಿಕ ಪ್ರಸಂಗಿಗಳು ಎಂದು ಹೇಳಿ ವಿಡಿಯೋ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.