ರಸ್ತೆ ಬದಿ ಹೂ ಮಾರುತ್ತಿದ್ದ ಪುಟ್ಟ ಬಾಲಕಿಯ ಸಂಕಷ್ಟಕ್ಕೆ ಕಿವಿಯಾದ ಸಿಎಂ ಕುಮಾರಸ್ವಾಮಿ
ವಿದ್ಯಾಭ್ಯಾಸಕ್ಕೆ ನೆರವಾಗುವ ಭರವಸೆ ನೀಡಿದ ಮುಖ್ಯಮಂತ್ರಿ
ಮಂಡ್ಯ, ಆ.29: ರಸ್ತೆ ಬದಿಯಲ್ಲಿ ಹೂ ಮಾರಾಟ ಮಾಡುತ್ತಿದ್ದ ಪುಟ್ಟ ಬಾಲಕಿಯೊಬ್ಬಳನ್ನು ಕಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಾನು ಸಂಚರಿಸುತ್ತಿದ್ದ ಕಾರನ್ನು ನಿಲ್ಲಿಸಿ ಬಾಲಕಿಯ ಸಂಕಷ್ಟ ಆಲಿಸಿ ಮಾನವೀಯತೆ ಮೆರೆದ ಘಟನೆ ಇಂದಿಲ್ಲಿ ನಡೆದಿದೆ.
ಇಂದು ಬೆಳಗ್ಗೆ ಕುಮಾರಸ್ವಾಮಿಯವರು ಕೆ.ಆರ್.ಎಸ್.ನಿಂದ ರಾಮನಗರಕ್ಕೆ ಕಾರಿನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ದಾರಿಮಧ್ಯೆ ಬೆಳಗೊಳ ಗ್ರಾಮದ ಶ್ರೀರಂಗಪಟ್ಟಣದ ರಸ್ತೆಬದಿಯಲ್ಲಿ ಶಾಬಾಬ್ತಾಝ್ ಎಂಬ ಪುಟ್ಟ ಬಾಲಕಿ ಹೂ ಮಾರುತ್ತಾ ನಿಂತಿರುವುದನ್ನು ಅವರು ಗಮನಿಸಿದರು. ಕೂಡಲೇ ಕಾರಲ್ಲೇ ಬಾಲಕಿಯ ಹತ್ತಿರ ಹೋದ ಸಿಎಂ ಆಕೆಯನ್ನು ಮಾತನಾಡಿಸಿದ್ದಾರೆ. ಈ ವೇಳೆ ಶಾಬಾಬ್ತಾಝ್ ಮನೆಯ ಸಂಕಷ್ಟವನ್ನು ಮುಖ್ಯಮಂತ್ರಿಗೆ ತಿಳಿಸಿದ್ದಾಳೆ.
ಸಂಕಷ್ಟ ಆಲಿಸಿದ ಮುಖ್ಯಮಂತ್ರಿ ಬಾಲಕಿಯ ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿ ಭರವಸೆ ನೀಡಿದ್ದಲ್ಲದೆ, ಆಕೆಯ ತಂದೆಗೆ ತನ್ನನ್ನು ಬಂದು ಕಾಣುವಂತೆ ತಿಳಿಸಲು ಗ್ರಾಮಸ್ಥರಲ್ಲಿ ಹೇಳಿ ಪ್ರಯಾಣ ಮುಂದುವರಿಸಿದರು.
ಮುಖ್ಯಮಂತ್ರಿಯ ಸರಳತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.