ಚುನಾವಣೆ ಘೋಷಣೆಗೂ ಮೊದಲೇ ಬಿಜೆಪಿಯಲ್ಲಿ ಟಿಕೆಟ್ಗಾಗಿ ಫೈಟ್..!
ಕಲಬುರಗಿ, ಸೆ. 1: ಲೋಕಸಭಾ ಚುನಾವಣೆ ಘೋಷಣೆಗೂ ಮೊದಲೇ ಬಿಜೆಪಿಯಲ್ಲಿ ಟಿಕೆಟ್ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದ್ದು, ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಮ್ಮುಖದಲ್ಲೆ ನಾಯಕರಿಬ್ಬರು ಜಟಾಪಟಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಶನಿವಾರ ನಗರದ ಐವಾನ್ ಎ ಶಾಹಿ ಅತಿಥಿ ಗೃಹದಲ್ಲಿ ಯಡಿಯೂರಪ್ಪ ಸಭೆ ನಡೆಸುತ್ತಿದ್ದರು. ಈ ವೇಳೆ ಬಂಜಾರ ಸಮುದಾಯದ ಮುಖಂಡರು ಸುಭಾಷ್ ರಾಥೋಡ್ಗೆ ಟಿಕೆಟ್ ನೀಡಬೇಕೆಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಟಿಕೆಟ್ ಆಕಾಂಕ್ಷಿ ಬಾಬುರಾವ್ ಚವ್ಹಾಣ್, ವೈಯಕ್ತಿಕ ಮನವಿ ಸಲ್ಲಿಸಿ ಬಂಜಾರ ಸಮುದಾಯದಿಂದ ಟಿಕೆಟ್ ಕೊಡಿ ಎಂದು ಕೇಳುವುದು ಸಲ್ಲ ಎಂದರು.
ಈ ವೇಳೆ ‘ಸಮೀಕ್ಷೆ ನಡೆಸಿ ಅರ್ಹರಿಗೆ ಟಿಕೆಟ್ ನೀಡಲಾಗುವುದು’ ಎಂದು ಹೇಳಿ ಬಿ.ಎಸ್.ಯಡಿಯೂರಪ್ಪ ಸ್ಥಳದಿಂದ ಹೊರಟು ಹೋದರು. ರಾಜ್ಯಾಧ್ಯಕ್ಷರ ನಿರ್ಗಮನದ ಬಳಿಕ ಸುಭಾಷ್ ರಾಥೋಡ್ ಹಾಗೂ ಬಾಬುರಾವ್ ಚವ್ಹಾಣ್ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ.
ಅವರೇ ಬಡಿದಾಡಿಕೊಂಡು ಸಾಯ್ತಾರೆ: ರಾಜ್ಯದಲ್ಲಿ ಸರಕಾರ ಎನ್ನುವುದೇ ಇಲ್ಲದಂತಾಗಿದೆ. ಈ ಮೈತ್ರಿ ಸರಕಾರದಲ್ಲಿ ಅವರವರೆ ಬಡಿದಾಡಿಕೊಂಡು ಸಾಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಟೀಕಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬರಲಿದೆ. ನಿರೀಕ್ಷೆಗೂ ಮೀರಿ ಈ ಬಾರಿ ಬಿಜೆಪಿ ಹೆಚ್ಚಿನ ಸ್ಥಾನದಲ್ಲಿ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ಗರಿಷ್ಠ ಮೊತ್ತದ ನೋಟು ಅಮಾನ್ಯ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕೆ ಸಲ್ಲ. ನೋಟು ಅಮಾನ್ಯದಿಂದ ದೇಶದ ಜಿಡಿಪಿ ಏರಿಕೆಯಾಗಿದೆ ಎಂದರು.