ಮೈಸೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಪೆಟ್ರೋಲ್, ಡೀಸೆಲ್ನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸಲು ಒತ್ತಾಯ
ಮೈಸೂರು,ಸೆ.6: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಮತ್ತು ಪೆಟ್ರೋಲ್, ಡೀಸೆಲ್ನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ ನಡೆಯಿತು.
ನಗರದ ನ್ಯಾಯಾಲಯದ ಮುಂಭಾಗ ಇರುವ ಗಾಂಧಿ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅತೀ ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಯನ್ನು ದಿನೇ ದಿನೇ ಏರಿಕೆ ಮಾಡುತ್ತಿದ್ದು, ದೇಶದ ಜನ ತತ್ತರಿಸಿ ಹೋಗಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಕೂಡ ಬಸ್ ಟಿಕೆಟ್ ದರ ಹೆಚ್ಚಿಸಲು ಹೊರಟಿದೆ. ನಿತ್ಯವೂ ಪೆಟ್ರೋಲ್ ಡೀಸೆಲ್ ದರವನ್ನು ಪರಿಷ್ಕರಿಸಿ ದೇಶದ ಜನರ ಹಣವನ್ನು ಲೂಟಿ ಹೊಡೆಯುತ್ತಿದೆ. ನೋಟು ಅಮಾನ್ಯ, ಆರ್.ಟಿ.ಓ ಶುಲ್ಕಗಳ ಹೆಚ್ಚಳ, ರೇರಾ ಕಾಯ್ದೆ ಹಾಗೂ ಜಿಎಸ್ಟಿ ಯಂತಹ ಜನವಿರೋಧಿ ನಿರ್ಧಾರಗಳನ್ನು ಕೈಗೊಂಡು ಸರ್ಕಾರಕ್ಕೆ ಆದಾಯ ಬರುವ ಎಲ್ಲಾ ಸರಕುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರದಿರುವುದ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್ ಡೀಸೆನ್ನು ಕೂಡಲೇ ಜಿಎಸ್ಟಿ ವ್ಯಾಪ್ತಿಗೆ ತಂದು 83 ರೂ.ಗೆ ಇರುವ ಪೆಟ್ರೋಲ್ ದರವನ್ನು 40 ರೂ.ಗಳಿಗೆ ಇಳಿಸಿ ದೇಶದ ಜನರು ನೆಮ್ಮದಿಯ ಬದುಕು ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಸ್ ಲೋಕೇಶ್ಗೌಡ, ನಗರಾಧ್ಯಕ್ಷ ಪ್ರಜೀಶ್ ಪಿ. ಶಾಂತಮೂರ್ತಿ ಆರ್. ಸಿ.ಎಸ್.ನಂಜುಂಡಸ್ವಾಮಿ, ಶಾಂತರಾಜೇ ಅರಸ್, ಜಗದೀಶ್, ಸುನೀಲ್ ಕುಮಾರ್, ವಿನೋದ್, ಅಕ್ಷಯ್, ಪರಿಸರ ಚಂದ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.