ಬೇಕಿದ್ರೆ ಬಿಜೆಪಿಯಿಂದಲೇ ಐವರನ್ನು ರಾಜೀನಾಮೆ ಕೊಡಿಸೋಣ: ಕುಮಾರಸ್ವಾಮಿ
ಮಂಡ್ಯ, ಸೆ.11: ‘‘ಸ್ವಲ್ಪ ಸಮಯ ನೋಡೋಣ, ನಿಮಗೆ ಬೇರೇ ಥರಹ ಯೂಟರ್ನ್ ತಗೋಬೇಕಂತಿದ್ದರೆ, ಬಿಜೆಪಿಯಿಂದಲೇ ಐವರನ್ನು ರಾಜೀನಾಮೆ ಕೊಡಿಸೋಣ’’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜಾರಕಿಹೊಳಿ ಸಹೋದರರ ಅಸಮಾಧಾನದ ಕುರಿತಂತೆ ಮಂಡ್ಯದಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗೆ ಸಿಡಿಮಿಡಿಗೊಂಡ ಮುಖ್ಯಮಂತ್ರಿ ಈ ರೀತಿ ಪ್ರತಿಕ್ರಿಯಿಸಿದರು.
ಜಾರಕಿಹೊಳಿ ಸಹೋದರರ ನಡೆಯಿಂದ ಸರಕಾರಕ್ಕೇನಾದರೂ ದಕ್ಕೆಯಾಗಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಯಿಂದ ಸಿಡಿಮಿಡಿಗೊಂಡ ಸಿಎಂ, ಜಾರಕಿಹೊಳಿ ಸಹೋದರರ ಅಸಮಾಧಾನದ ಬಗ್ಗೆ ನನಗೇನು ಗೊತ್ತಿಲ್ಲ. ಈ ಬಗ್ಗೆ ಅವರೆಲ್ಲೂ ಹೇಳಿಕೆ ನೀಡಿಲ್ಲ. ಆದರೆ ಮಾಧ್ಯಮಗಳಲ್ಲಿ ಮಾತ್ರ ಈ ಬಗ್ಗೆ ಸುದ್ದಿ ನೋಡುತ್ತಿದ್ದೇನೆ. ಸರಕಾರ ಇನ್ನೇನೋ ಬಿದ್ದೇ ಬಿಟ್ಟಿತು ಎಂದು ಸುದ್ದಿ ಮಾಡುತ್ತೀರಿ. ನಿಮಗೆ ಅದೆಲ್ಲಿಂದ ಮಾಹಿತಿ ಸಿಗುತ್ತದೆಯೋ ಗೊತ್ತಿಲ್ಲ. ಮಾಧ್ಯಮಗಳು ಯಾವ ಉದ್ದೇಶದಿಂದ ಈ ರೀತಿ ಸುದ್ದಿ ಮಾಡುತ್ತಿವೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘‘ನಿಮಗೆ ಬೇಕು ಅಂತಿಂದ್ರೆ ಸ್ವಲ್ಪ ಸಮಯ ನೋಡೋಣ, ನಿಮಗೆ ಬೇರೇ ಥರಹ ಯೂಟರ್ನ್ ತಗೋಬೇಕಂತಿದ್ದರೆ, ಒಂದು ಐದು ಜನರನ್ನು ಬಿಜೆಪಿಯಿಂದಲೇ ರಾಜೀನಾಮೆ ಕೊಡಿಸೋಣ’’ ಎಂದು ಮಾಧ್ಯಮದವರನ್ನುದ್ದೇಶಿಸಿ ಹೇಳುವ ಮೂಲಕ ಕುಮಾರಸ್ವಾಮಿ ಕುತೂಹಲ ಮೂಡಿಸಿದರು.