ಸರಕಾರ ಉರುಳಿಸುತ್ತೇವೆ ಎನ್ನುವವರಿಗೇ ಉರುಳು ಹಾಕುತ್ತೇವೆ: ಬಿಜೆಪಿ ನಾಯಕರಿಗೆ ಸಚಿವ ಪುಟ್ಟರಾಜು ತಿರುಗೇಟು
ಮಂಡ್ಯ, ಸೆ.12: ರಾಜ್ಯ ಸಮ್ಮಿಶ್ರ ಸರಕಾರ ಉರುಳಿಸುತ್ತೇವೆನ್ನುವವರಿಗೇ ಉರುಳಾಕಲು ನಾವು ಎಲ್ಲಾ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಬುಧವಾರ ಮದ್ದೂರು ತಾಲೂಕು ಕೊಪ್ಪ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಸಂಬಂಧ ಪ್ರವಾಸ ಕೈಗೊಂಡಿದ್ದ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಸಮ್ಮಿಶ್ರ ಸರಕಾರ ಉರುಳಿಸಲು ಆಗಲ್ಲ ಎಂದರು. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ನಿಲ್ಲುವುದಾಗಿ ಕೇಂದ್ರ ಸಚಿವ ರಮೇಶ್ ಜಿಗಜಿಗಣಿ ನಮ್ಮ ಜತೆ ಈಗಾಗಲೇ ಮಾತುಕತೆ ನಡೆಸಿದ್ದು, ಅವರಿಗೇ ಮೊದಲು ಕುಣಿಕೆ ಹಾಕುತ್ತೇವೆ ಎಂದು ಅವರು ಜಿಗಜಿಗಣಿ ಹೇಳಿಕೆಗೆ ಎದುರೇಟು ನೀಡಿದರು.
ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಕ್ರಿಯೆಗೆ ಕೈಹಾಕಬಾರದು ಎಂದು ತೀರ್ಮಾನಿಸಿದ್ದೆವು. ಆದರೆ, ಕಾಂಗ್ರೆಸ್, ಜೆಡಿಎಸ್ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ, ಸರಕಾರ ಉರುಳುತ್ತೆ ಎಂದು ಬಿಜೆಪಿಯವರು ಪ್ರತಿನಿತ್ಯ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ನಾವು ನಿಜ ಮಾಹಿತಿ ಕೊಡಲು ನಿಂತಿದ್ದೇವೆ, ಅದನ್ನು ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಕೊಪ್ಪ ಹೋಬಳಿ ಕೆರೆಗಳ ತುಂಬಿಸಲು ಎಲ್ಲಾ ಕ್ರಮವಹಿಸಿದ್ದೇವೆ. ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಸ್ಥಳೀಯ ಶಾಸಕರ ಆಶಯದಂತೆ ರೈತರ ಭೂಮಿಗೆ ಸಮರ್ಪಕವಾಗಿ ನೀರು ಹರಿಸಲಾಗುವುದು ಎಂದು ಸಚಿವರು ಹೇಳಿದರು.
ಶಾಸಕ ಕೆ.ಸುರೇಶ್ಗೌಡ, ಜೆಡಿಎಸ್ ಮುಖಂಡರು ಹಾಗೂ ಅಧಿಕಾರಿಗಳು ಹಾಜರಿದ್ದರು.